ಬೆಂಗಳೂರು: ಲೋಕಸಭಾ ಚುನಾವಣೆ ಮುನ್ನಾದಿನವಾದ ಬುಧವಾರ ನಗರದ ಮೂರೂ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು ಮನೆ–ಮನೆಗೆ ತೆರಳಿ ಮತಯಾಚನೆ ಮಾಡಿದರು.
ಬೆಂಗಳೂರು ಕೇಂದ್ರ ಕ್ಷೇತ್ರದ ಅಭ್ಯರ್ಥಿ ಪಿ.ಸಿ. ಮೋಹನ್, ಬೆಳಿಗ್ಗೆ ಶೇಷಾದ್ರಿಪುರ, ಕುಮಾರಪಾರ್ಕ್, ನೆಹರು ನಗರ, ಮಾಧವನಗರ, ಬಿನ್ನಿಪೇಟೆ, ಬಳೆಪೇಟೆ, ಅಕ್ಕಿಪೇಟೆ, ಚಾಮರಾಜಪೇಟೆ ಮತ್ತು ಸಂಜೆ ಶಾಂತಿನಗರ, ಜೋಗುಪಾಳ್ಯ, ಶಾಂತಲಾನಗರ, ರಿಚ್ಮಂಡ್ ಟೌನ್ ಭಾಗಗಳಲ್ಲಿ ಮನೆ–ಮನೆಗೆ ಭೇಟಿ ಮಾಡಿ, ಬೆಂಬಲ ಕೋರಿದರು. ಬೆಂಗಳೂರು ಕೇಂದ್ರ ವ್ಯಾಪ್ತಿಯ ಎಲ್ಲಾ ವಿಧಾನ ಸಭಾಕ್ಷೇತ್ರಗಳಲ್ಲಿ ಮುಖಂಡರಾದ ಎಸ್.ಸುರೇಶ್ಕುಮಾರ್, ಅರವಿಂದ ಲಿಂಬಾವಳಿ, ಎಸ್.ರಘು, ಸಚ್ಚಿದಾನಂದಮೂರ್ತಿ, ನಿರ್ಮಲಕುಮಾರ್ ಸುರಾನ ಹಾಗೂ ಬಿಬಿಎಂಪಿ ಸದಸ್ಯರು ಮತ್ತು ಪಕ್ಷದ ಮುಖಂಡರು ಮನೆ ಮನೆ ಭೇಟಿ ನೀಡಿ ಮತ ನೀಡುವಂತೆ ಮನವಿ ಮಾಡಿದರು.
ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಡಿ.ವಿ.ಸದಾನಂದಗೌಡ, ಕೆಂಗೇರಿ ಭಾಗದಲ್ಲಿ ಮನೆ–ಮನೆಗೆ ಭೇಟಿ ಮಾಡಿ, ಬೆಂಬಲ ಯಾಚಿಸಿದರು. ಪಕ್ಷದ ಮುಖಂಡರು ಜತೆಗಿದ್ದರು. ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ, ಹೆಬ್ಬಾಳ ಕ್ಷೇತ್ರದಲ್ಲಿ ಶಾಸಕ ಜಗದೀಶಕುಮಾರ್ ಹಾಗೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ದಾಸರಹಳ್ಳಿ ಕ್ಷೇತ್ರದಲ್ಲಿ ಶಾಸಕ ಎಸ್. ಮುನಿರಾಜು ಮತಯಾಚನೆ ಮಾಡಿದರು. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅನಂತಕುಮಾರ್, ಆರ್. ಅಶೋಕ್ ಮತ್ತಿತರರು ಮನೆ–ಮನೆಗೆ ತೆರಳಿ ಬೆಂಬಲ ಯಾಚಿಸಿದರು.