ಇಂದು ಅಮ್ನೆಸ್ಟಿ ಇಂಟರ್ನ್ಯಾಷನಲ್ನಂತಹ ಸಂಸ್ಥೆಗಳು ಸಮೀಕ್ಷೆ ನಡೆಸಿ ಜಗತ್ತಿನಾದ್ಯಂತ ನೂರಾರು ದೇಶಗಳು ಮರಣದಂಡನೆಯನ್ನು ಬಹಿಷ್ಕರಿಸಿವೆ ಎಂದು ವರದಿ ಮಾಡುತ್ತಿವೆ, ಯೂರೋಪಿನ ಹೆಚ್ಚು ಕಡಿಮೆ ಎಲ್ಲ ದೇಶಗಳೂ ಈಗಾಗಲೇ ಮರಣದಂಡನೆಯನ್ನು ತಮ್ಮ ಕಾನೂನು ಸಂಹಿತೆಯಿಂದ ತೆಗೆದುಹಾಕಿವೆ. ಇದು ನಿಜಕ್ಕೂ ಆಶಾದಾಯಕವಾದ ಬೆಳವಣಿಗೆಯಾಗಿದೆ. ಇದು ಮನುಷ್ಯ ನಾಗರಿಕತೆಯು ಆರೋಗ್ಯಕರ ದಿಕ್ಕಿನಲ್ಲಿ ಮುನ್ನಡೆಯುತ್ತಿರುವುದರ ಸೂಚನೆಯಾಗಿದೆ. ಯಾವುದೇ ಕಾನೂನು ಸಂಹಿತೆಯಲ್ಲಿ ಮರಣದಂಡನೆ ಒಂದು ಕಾನೂನಾತ್ಮಕ ಶಿಕ್ಷೆಯಾಗಿರುವಷ್ಟೂ ಕಾಲ ಅದನ್ನು ಮೃಗಪ್ರಭುತ್ವದಲ್ಲಷ್ಟೇ ಕಂಡು ಬರುವ - ಪ್ರತೀಕಾರ ಸಂಹಿತೆ ಎಂದು ಕರೆಯಬೇಕಲ್ಲದೆ ನಿಜಾರ್ಥದಲ್ಲಿ ಅದನ್ನು ನಾಗರಿಕ ಕಾನೂನು ಎಂದು ಕರೆಯಲು ಬರುವುದಿಲ್ಲ. ನಾವು ನೀಡುವ ಶಿಕ್ಷೆ ಛದ್ಮವೇಷದ ಪ್ರತೀಕಾರವಾಗಬಾರದು. ಸಂದರ್ಭವಶಾತ್, ಪರಿಸ್ಥಿತಿಯ ಕೈಬೊಂಬೆಯಂತೆ ವರ್ತಿಸುವ ಒಬ್ಬ ಕೊಲೆಗಾರ ಕ್ಷಮಾರ್ಹನಾಗಿರುವನು. ಆದರೆ ಜವಾಬ್ದಾರಿಯುತ ಶಕ್ತಿ ಮತ್ತು ಸ್ಥಾನಮಾನ ಹೊಂದಿರುವ ಒಂದು ನ್ಯಾಯಸಂಹಿತೆ ತಾನೂ ಆ ಕೊಲೆಗಡುಕನ ಕೃತ್ಯವನ್ನೇ ಅನುಸರಿಸಿದರೆ ಅದು ಖಂಡಿತವಾಗಿ ಕ್ಷಮಾರ್ಹವಲ್ಲ.
ಏಕೆಂದರೆ ಮರಣದಂಡನೆಯಂತಹ ಶಿಕ್ಷೆಗೆ ಬಲಿಯಾಗುವ ಒಬ್ಬ ಅಪರಾಧಿ ತನ್ನ ಸಮಾಜದ ರೋಗಚಿಹ್ನೆಗಳನ್ನು ತೋರಿಸುತ್ತಿರುವವನು. ಇಂತಹ ಪರಿಸ್ಥಿತಿಯಲ್ಲಿ ರೋಗಚಿಹ್ನೆಗಳಿಗೆ ಚಿಕಿತ್ಸೆ ನೀಡಲು ಹೋಗದೆ ರೋಗದ ಮೂಲವನ್ನು ಸರಿಯಾಗಿ ಹಿಡಿಯಬೇಕಾಗುತ್ತದೆ. ಓರ್ವ ಅಪರಾಧಿ ವ್ಯಕ್ತಿಗತವಾಗಿ ಒಬ್ಬ ರೋಗಗ್ರಸ್ತನೆಂದು ತೀರ್ಮಾನಿಸುವ ನಾಗರಿಕತೆ ಆತ್ಮವಂಚನೆ ಮಾಡಿಕೊಳ್ಳುತ್ತಿರುತ್ತದೆ. ಒಂದು ನಾಗರಿಕ ಸಂಹಿತೆಯು ಸರಣಿ ಹಂತಕರಿಗೆ, ವಿಕೃತ ಕಾಮಿಗಳಿಗೆ, ಅತ್ಯಾಚಾರಿಗಳಿಗೆ ಸೂಕ್ತವಾದ ಮಾನಸಿಕ ಚಿಕಿತ್ಸೆ ನೀಡಿ ಗುಣಮುಖರನ್ನಾಗಿಸುವ ನಿಟ್ಟಿನಲ್ಲಿ ಯೋಚಿಸಬೇಕಲ್ಲದೆ ಅಂಥವರನ್ನು ಒಂದೇ ಸಲಕ್ಕೆ ಮುಗಿಸಿಬಿಡಬಾರದು. ಇನ್ನಾವ ಚಿಕಿತ್ಸೆಯಿಂದಲೂ ಸರಿಪಡಿಸಲಾಗದ ಮತ್ತು ಸಮಾಜಕ್ಕೆ ಕಂಟಕಪ್ರಾಯರಾಗಬಲ್ಲ ರೋಗಿಗಳಾಗಿದ್ದಲ್ಲಿ (ಅಪರಾಧಿಗಳಲ್ಲ) ಅಂಥವರನ್ನು ಮನೋರೋಗ ವೈದ್ಯರ ಉಸ್ತುವಾರಿಯಲ್ಲಿ ಚಿರನಿದ್ರೆಗೆ ಕಳುಹಿಸಬಹುದಾದರೂ ಅಂತಹ ಶಿಕ್ಷೆಯನ್ನು ಅಪರಾಧ ಕಾಯಿದೆಯ ಅಡಿಯಲ್ಲಿ ಅನುಮೋದಿತವಾದ ದಯಾಮರಣ ಎಂದು ಘೋಷಿಸಬೇಕೇ ವಿನಾ ಅದನ್ನು ಮರಣಶಾಸನ ಎಂದು ಕರೆಯಬಾರದು.
ಇಂದು ಉಮೇಶ್ ರೆಡ್ಡಿಯಂತಹ ವಿಕೃತಕಾಮಿಗಳು ಜೈಲಿನಲ್ಲಿದ್ದೂ ಗಂಭೀರವಾದ ಓದಿನಲ್ಲಿ ತೊಡಗಿಕೊಂಡಿದ್ದಾರೆ. ಜೈಲಿನಲ್ಲೇ ವಿದ್ಯಾಭ್ಯಾಸ ಮುಗಿಸಿ ಡಿಗ್ರಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಕೆಲವರು ಜೀವದಾನಕ್ಕೆ ಮೊರೆ ಇಡುತ್ತಿದ್ದಾರೆ. ಇಂತಹ ಮನವಿಗಳಿಗೆ ನಮ್ಮ ಕಾನೂನು ವ್ಯವಸ್ಥೆಯು ಕಿವುಡಾದರೆ ಅದನ್ನು ಕಠೋರತನವೆಂದೇ ಕರೆಯಬೇಕಾಗುತ್ತದೆ.
ಅಪರಾಧ ಮಾಡಿದಾತ ತನ್ನ ಹಳೆಯ ಚಾಳಿಯನ್ನೇ ಮುಂದುವರಿಸಲು ಈ ರೀತಿ ಸುಳ್ಳು ಹೇಳುತ್ತಿರುವನೆಂಬ ಅನುಮಾನ ಹುಟ್ಟದಿರದು. ಅಂತಹ ಅನುಮಾನಗಳನ್ನು ಬಗೆಹರಿಸಿಕೊಂಡು ನಿಜವನ್ನು ಪತ್ತೆ ಹಚ್ಚಲು ವಿವಿಧ ಮಾರ್ಗೋಪಾಯಗಳಿವೆ. ಆಧುನಿಕ ನರವಿಜ್ಞಾನಶಾಸ್ತ್ರದ ವಿವಿಧ ಸಂಶೋಧನೆಗಳನ್ನು - ನಾರ್ಕೋ ಪರೀಕ್ಷೆ, ಬ್ರೈನ್ ಮ್ಯಾಪಿಂಗ್, ಟ್ರುತ್ ಸೆರಮ್ ಇತ್ಯಾದಿ - ನಮ್ಮ ವಿಧಿವಿಜ್ಞಾನ ಪ್ರಯೋಗಾಲಯಗಳು ಈಗಾಗಲೇ ಯಶಸ್ವಿಯಾಗಿ ಬಳಸಿಕೊಳ್ಳುತ್ತಿವೆ.
ವಿಶ್ವದರ್ಜೆಯ ಗುಣಮಟ್ಟದ ಚಿಕಿತ್ಸೆಗಳನ್ನಾದರೂ ನೀಡಿ ಅಂತಹ ಮನೋರೋಗಿಗಳನ್ನು ಮುಖ್ಯವಾಹಿನಿಗೆ ಸೇರಿಸಬೇಕಾದುದು ಒಂದು ನಾಗರಿಕ ವ್ಯವಸ್ಥೆಯ ಜವಾಬ್ದಾರಿಯಾಗಿದೆ. ಆಗ ಮಾತ್ರ ಒಂದು ವ್ಯವಸ್ಥೆಯು - ಒಬ್ಬ ವಿಕೃತಕಾಮಿಯನ್ನು ಅಥವಾ ಕೊಲೆಯ ವ್ಯಸನಿಯನ್ನು ಮನುಷ್ಯನನ್ನಾಗಿ ಪರಿವರ್ತಿಸಿದ - ಹೆಗ್ಗಳಿಕೆಗೆ ಪಾತ್ರವಾಗುತ್ತದೆ. ಹಾಗಲ್ಲದೆ ಮರಣದಂಡನೆಯ ಹೆಸರಿನಲ್ಲಿ ಅಮೂಲ್ಯವಾದ ಮನುಷ್ಯಜೀವವನ್ನು ನಾಶ ಮಾಡುವುದು ನಿಜಕ್ಕೂ ಲಜ್ಜೆಗೇಡು, ಇನ್ನು ಹೆಗ್ಗಳಿಕೆಯಂತೂ ದೂರದ ಮಾತು. ತೆರೆದ ಕೊಳವೆ ಬಾವಿಗಳೊಳಗೆ ಬೀಳುವ ಪುಟ್ಟ ಕಂದಮ್ಮಗಳನ್ನು ರಕ್ಷಿಸಲು ಹರಸಾಹಸ ಮಾಡುವ ಜನಕ್ಕೆ ಜೀವದ ಬೆಲೆ ಗೊತ್ತಿಲ್ಲವೆಂದರೆ ಏನರ್ಥ?
ಇವಿಷ್ಟೂ ಸಾಮಾಜಿಕ ಅಪರಾಧಿಗಳ ಕತೆಯಾಯಿತು. ಇನ್ನು ರಾಜಕೀಯ ಅಪರಾಧ ಇದಕ್ಕಿಂತಲೂ ಜಟಿಲವಾದ ಸಮಸ್ಯೆಯಾಗಿದೆ. ಗಾಂಧಿಯನ್ನು ಕೊಂದವನು ಅಥವಾ ಮುಂಬಯಿಯಲ್ಲಿ ಬಾಂಬ್ ದಾಳಿ ನಡೆಸಿದವನು ಖಂಡಿತವಾಗಿ ಪರಿಸ್ಥಿತಿಯ ಕೈಗೊಂಬೆಯಂತೆ ವರ್ತಿಸಿ ಅಪರಾಧ ಕೃತ್ಯಗಳನ್ನು ನಡೆಸಿರಲಾರ. ಅವನಿಗೆ ತಾನೇನು ಮಾಡುತ್ತಿದ್ದೇನೆ ಎಂದು ಚೆನ್ನಾಗಿಯೇ ತಿಳಿದಿರುತ್ತದೆ. ಇಂತಹವರಿಗೆ ವಿಧಿಸಲಾಗುವ ಶಿಕ್ಷೆ ಯಾವ ಪ್ರಕಾರದ್ದಾಗಿರಬೇಕು ಎಂಬುದು ಚರ್ಚಾಯೋಗ್ಯವಾದ ಸಂಗತಿಯಾದರೂ ಸದ್ಯಕ್ಕೆ ರಾಜಕೀಯ ಕೈದಿಗಳಿಗೆ ಶಿಕ್ಷೆ ವಿಧಿಸುವಾಗ ಬಹುತೇಕ ಸಂದರ್ಭಗಳಲ್ಲಿ ನ್ಯಾಯಾಲಯಗಳು ರಾಜಕೀಯ ಒತ್ತಡ ಅನುಭವಿಸುತ್ತಿರುತ್ತವೆ. ರಾಜಕೀಯ ಅಪರಾಧಗಳ ವಿಷಯದಲ್ಲಿ ನ್ಯಾಯಾಂಗ ವ್ಯವಸ್ಥೆ ಸಮರ್ಥವಾದ ತೀರ್ಮಾನಗಳನ್ನು ತೆಗೆದುಕೊಳ್ಳಲು ನ್ಯಾಯಾಲಯಗಳು ಈಗ ಚೀನಾದಲ್ಲಾಗುತ್ತಿರುವಂತೆ ಹೆಚ್ಚು ಆಧುನಿಕವೂ, ನಿಷ್ಪಕ್ಷಪಾತವೂ ಆದ ಕಾನೂನು ವ್ಯವಸ್ಥೆಯನ್ನು ಹೊಂದಬೇಕಾದುದು ಅಗತ್ಯ.
ಇಂದು ಐಎಸ್ಐಎಸ್ ಉಗ್ರರು, ನಕ್ಸಲರು ಮೊದಲಾದವರು ನಡೆಸುತ್ತಿರುವ ನರಹತ್ಯೆಗಳನ್ನು ನಮ್ಮ ಕಾನೂನು ಸಂಹಿತೆಗಳು ಅಪರಾಧವೆಂದು ಪರಿಗಣಿಸುವವಾದರೂ ಅವರ ಬಳಿ ಅವರದ್ದೇ ಆದ ಕಾನೂನು ಸಂಹಿತೆಗಳಿರುತ್ತವೆ. ಆ ಸಂಹಿತೆಗಳ ಪ್ರಕಾರ ಅವರ ನರಹತ್ಯೆ ಅವರ ಪಾಲಿನ ಕರ್ತವ್ಯವೋ ಅಥವಾ ಗುರಿಸಾಧನೆಗೆ ಅನಿವಾರ್ಯವಾದ ಕೃತ್ಯವೋ ಆಗಿರುತ್ತದೆ.
ನಾವು ಮನುಷ್ಯರು ವಾಸಿಸಲು ಯೋಗ್ಯವಾದ ಸಮಾಜವನ್ನು ನಿರ್ಮಿಸಿಕೊಂಡಿಲ್ಲವೆಂಬುದಕ್ಕೆ ಇಂದಿನ ರಾಜಕೀಯ ಮತ್ತು ಧಾರ್ಮಿಕ ಅಪರಾಧಗಳು ರುಜುವಾತುಗಳಾಗಿವೆ. ಅಂಥದೊಂದು ಯೋಗ್ಯ ಮತ್ತು ಮಾನವೀಯ ಸಮಾಜದಲ್ಲಿ ಮರಣದಂಡನೆ ಪ್ರಯತ್ನವೇ ಇಲ್ಲದಂತೆ ಕಣ್ಮರೆಯಾಗುತ್ತದೆ.
ಅಲ್ಲಿಯ ತನಕ ಕಾನೂನಿನ ಹೆಸರಿನಲ್ಲಿ ಅಥವಾ ಕಾನೂನನ್ನು ಕೈಗೆ ತೆಗೆದುಕೊಂಡವರ ಹೆಸರಿನಲ್ಲಿ ಮರಣದಂಡನೆ (ಇನ್ನು ಆತ್ಮಹತ್ಯೆಯಂತೂ ಇವೆರಡಕ್ಕಿಂತಲೂ ಘೋರವಾದ ಸಾವಿನ ಶಿಕ್ಷೆಯಾಗಿದೆ) ಜಾರಿಯಲ್ಲಿದ್ದೇ ಇರುತ್ತದೆ. ಹಾಗೆಂದು ಸತ್ಯಯುಗ ಪ್ರಾರಂಭವಾಗುವವರೆಗೂ ನಾವು ಕಾಯುತ್ತ ಕೂರುವಂತಿಲ್ಲ. ಒಂದು ಮಾನವೀಯ ಸಮಾಜವನ್ನು ರೂಪಿಸುವ ನಿಟ್ಟಿನಲ್ಲಿ ಮರಣದಂಡನೆಯನ್ನು ಶಾಶ್ವತವಾಗಿ ಬಹಿಷ್ಕರಿಸುವುದೇ ಕಾನೂನಿನ ನೆಲೆಯಲ್ಲಿ ಮೊದಲ ಮತ್ತು ಸರಿಯಾದ ಹೆಜ್ಜೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.