ಬೆಂಗಳೂರು: ಸ್ವಜನ ಪಕ್ಷಪಾತ ನಡೆಸಿದ ಆರೋಪದಿಂದ ಮುಕ್ತರಾಗಿರುವ ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ ಬಿ. ಅಡಿ ಅವರು ಸೋಮವಾರ ಕಚೇರಿಗೆ ಮರಳಿ ಕರ್ತವ್ಯ ನಿರ್ವಹಿಸಿದರು. ಅವರು ಮಾರ್ಚ್ ಮೊದಲ ವಾರದಿಂದ ಕಚೇರಿಗೆ ಬಂದಿರಲಿಲ್ಲ.
ನ್ಯಾಯಮೂರ್ತಿ ಅಡಿ ಅವರು ಸ್ವಜನಪಕ್ಷಪಾತ ನಡೆಸಿದ್ದಾರೆ. ಹಾಗಾಗಿ ಅವರನ್ನು ಪದಚ್ಯುತಗೊಳಿಸಬೇಕು ಎಂದು ಕಾಂಗ್ರೆಸ್ಸಿನ 78 ಶಾಸಕರು ವಿಧಾನಸಭೆಯಲ್ಲಿ ಪ್ರಸ್ತಾವನೆ ಮಂಡಿಸಿದ್ದರು.
ಕಾಂಗ್ರೆಸ್ ಶಾಸಕರ ಆರೋಪಗಳ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಆರ್.ಬಿ. ಬೂದಿಹಾಳ್ ಸಮಿತಿ, ‘ನ್ಯಾಯಮೂರ್ತಿ ಅಡಿ ವಿರುದ್ಧದ ಆರೋಪಗಳಿಗೆ ಆಧಾರ ಇಲ್ಲ’ ಎಂದು ವರದಿ ನೀಡಿದೆ.
‘ನನ್ನ ವಿರುದ್ಧ ಆರೋಪಗಳು ಕೇಳಿ ಬಂದಾಗಲೂ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಂಡೆ. ಆರೋಪ ಎದುರಿಸುತ್ತಿದ್ದ ದಿನಗಳಲ್ಲಿ ನಾನು ಸರ್ಕಾರಿ ನಿವಾಸವನ್ನಾಗಲಿ, ಸರ್ಕಾರ ಒದಗಿಸಿದ್ದ ವಾಹನವನ್ನಾಗಲಿ ಬಳಸಲಿಲ್ಲ’ ಎಂದು ನ್ಯಾಯಮೂರ್ತಿ ಅಡಿ ಹೇಳಿದರು.