ಅನ್ನಭಾಗ್ಯ, ಕ್ಷೀರಭಾಗ್ಯ, ತಾಳಿಭಾಗ್ಯ ಇನ್ನಿತರ ಭಾಗ್ಯಗಳನ್ನು ಜನರಿಗೆ ನೀಡುವುದಕ್ಕಿಂತಲೂ ಹೆಚ್ಚಾಗಿ ‘ಪ್ರಚಾರ ಭಾಗ್ಯ’ದಲ್ಲಿ ನಿರತರಾಗಿರುವ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೀರ ಕನಿಷ್ಠ ಭಾಗ್ಯವಾದ ‘ಮರಳು ಭಾಗ್ಯ’ವನ್ನು ನಮ್ಮ ಜನರಿಗೆ ನೀಡಿ ನೆಮ್ಮದಿಯಿಂದ ಮನೆ ಕಟ್ಟಿಸಿಕೊಳ್ಳಲು ಅನುಕೂಲ ಮಾಡಿಕೊಡದಿರುವುದು ತುಂಬಾ ನೋವಿನ ಸಂಗತಿ.
ತಮ್ಮ ಕನಸಿನ ಸೂರು ಕಟ್ಟಿಕೊಂಡು ಅದರಲ್ಲಿ ನೆಮ್ಮದಿಯಿಂದ ವಾಸಿಸಲು ಪ್ರಕೃತಿದತ್ತವಾಗಿರುವ ಮರಳನ್ನು ಜನಸಾಮಾನ್ಯರಿಗೆ ಉಚಿತವಾಗಿ ಬೇಡ, ಸರ್ಕಾರ ನಿಗದಿಪಡಿಸಿರುವ ಹಣ ಪಡೆದು ಒದಗಿಸಲು ಸಂಪೂರ್ಣವಾಗಿ ವಿಫಲವಾಗಿರುವ ನಮ್ಮ ಸರ್ಕಾರದ ಅದಕ್ಷ ಆಡಳಿತಕ್ಕೆ ಏನನ್ನೋಣ?
ಸದಾ ಭಾಗ್ಯಗಳ ಮಂತ್ರ ಪಠಿಸುತ್ತಾ ಮಾಧ್ಯಮಗಳಲ್ಲಿ ದಿನನಿತ್ಯ ಬರೀ ಪ್ರಚಾರ ಭಾಗ್ಯ ಪಡೆಯುತ್ತಿರುವ ನಮ್ಮ ಮಂತ್ರಿಗಳಿಗೆ, ಮುಖ್ಯಮಂತ್ರಿಗಳಿಗೆ ಜನಸಾಮಾನ್ಯ ಅನುಭವಿಸುತ್ತಿರುವ ಮರಳು ಸಂಕಟದ ಗೋಳು ಇನ್ನೂ ತಟ್ಟದೇ ಇರುವುದು ನಾಚಿಕೆಗೇಡಿನ ಸಂಗತಿ. ಮರಳು ದಂಧೆಯಲ್ಲಿ ತೊಡಗಿರುವವರಿಂದ ಹಣ ದೋಚುವುದನ್ನು ನಿಲ್ಲಿಸಿ, ಜನ ಸಾಮಾನ್ಯರ ಪಾಲಿಗೆ ಗಗನ ಕುಸುಮವಾಗಿರುವ ಮರಳನ್ನು ದೊರಕಿಸಿಕೊಡಲು ಸರ್ಕಾರ ಇನ್ನಾದರೂ ಗಮನ ಹರಿಸುವುದೆ?