ಒಂದು ಕಾಲದಲ್ಲಿ ಬೆಂಗಳೂರನ್ನು ‘ಉದ್ಯಾನ ನಗರಿ’ ಎನ್ನುತ್ತಿದ್ದರು. ಸದಾ ತಂಪು ಹವಾಮಾನದ ಬೆಂಗಳೂರು ದೇಶ ವಿದೇಶಗಳ ಜನರನ್ನು ಆಕರ್ಷಿಸುತ್ತಿತ್ತು. ಇಲ್ಲಿರುವಷ್ಟು ಮರಗಳು, ಉದ್ಯಾನಗಳು ಭಾರತದ ಯಾವ ನಗರದಲ್ಲೂ ಇರಲಿಲ್ಲ. ಆದರೆ ಈಗ ಅಭಿವೃದ್ಧಿಯ ನಾಗಾಲೋಟದಲ್ಲಿ ಬೆಂಗಳೂರು ಬದಲಾಗಿದೆ. ತಂಪು ಹವೆ ದೂರವಾಗಿ ಮಳೆಗಾಲದಲ್ಲೂ ಸೆಕೆ ಕಾಲಿಟ್ಟಿದೆ.
ಕಾಂಕ್ರೀಟ್ ಕಟ್ಟಡ, ರಸ್ತೆ ಅಗಲೀಕರಣ, ಮೆಟ್ರೊ ರೈಲು- ಮುಂತಾದ ಹಲವಾರು ಕಾರಣಗಳಿಗಾಗಿ ಸಾವಿರಾರು ಮರಗಳನ್ನು ಕಡಿದುಹಾಕಲಾಗಿದೆ. ಈ ಮರಹನನ ಎಷ್ಟು ಅವ್ಯಾಹತವಾಗಿ ನಡೆದಿದೆಯೆಂದರೆ ಇತ್ತೀಚೆಗೆ ಜಾಹೀರಾತು ಫಲಕಗಳು ಕಾಣುವುದಿಲ್ಲ ಎಂಬ ಕಾರಣಕ್ಕಾಗಿಯೂ ಹಲವಾರು ಮರಗಳನ್ನು ರಾತೋರಾತ್ರಿ ಕಡಿದುಹಾಕಲಾಗಿದೆ. ಕಳೆದ ವರ್ಷ ಹೀಗೆ ಜಾಹೀರಾತು ಫಲಕಗಳ ಸಲುವಾಗಿ ಮರಗಳನ್ನು ಕಡಿದ ಬಗ್ಗೆ 24 ದೂರುಗಳು ದಾಖಲಾಗಿದ್ದವು.
ಕೆಲವರಿಗೆ ₨ 10 ಸಾವಿರ ದಂಡ ಹಾಕಿದ್ದು ಬಿಟ್ಟರೆ ಇಂತಹ ಮರಗಳ್ಳರನ್ನು ತಡೆಯಲು ಮಹಾನಗರ ಪಾಲಿಕೆ ಬೇರೇನೂ ಕ್ರಮಗಳನ್ನು ಕೈಗೊಂಡಿಲ್ಲ. ಬೆಂಗಳೂರಿನ ನಾಗರಿಕರು ಹೊರಗಿನವರಿಗೆ ಹೆಮ್ಮೆಯಿಂದ ತೋರಿಸುತ್ತಿದ್ದ ಲಾಲ್ಬಾಗ್ ಮತ್ತು ಕಬ್ಬನ್ ಪಾರ್ಕ್ಗಳಲ್ಲೂ ಮರಗಳ ಹನನ ಮತ್ತು ಕಳ್ಳತನ ಪದೇಪದೇ ನಡೆಯುತ್ತಿದೆ.
95 ಲಕ್ಷ ದಾಟಿರುವ ಬೆಂಗಳೂರಿನ ಜನಸಂಖ್ಯೆಗೆ ಈಗ ಉಳಿದಿರುವುದು ಕೇವಲ 14,78,412 ಮರಗಳು ಮಾತ್ರ ಎನ್ನುವುದು ಭಾರತೀಯ ವಿಜ್ಞಾನ ಸಂಸ್ಥೆ ನಡೆಸಿದ ಸಮೀಕ್ಷೆಯ ಫಲಿತಾಂಶ. ಕಿಕ್ಕಿರಿದಿರುವ ವಾಹನಗಳಿಂದಾಗಿ ಈಗಾಗಲೇ ವಾಯುಮಾಲಿನ್ಯದಲ್ಲಿ ಅಪಾಯದ ಮಟ್ಟವನ್ನು ಮುಟ್ಟಿರುವ ಬೆಂಗಳೂರಿನಲ್ಲಿ ಇರುವ ಮರಗಳನ್ನೂ ರಕ್ಷಿಸದೇ ಹೋದರೆ ಭಯಾನಕ ಪರಿಸ್ಥಿತಿ ಉಂಟಾದೀತು.
198 ವಾರ್ಡ್ಗಳಿರುವ ಬೆಂಗಳೂರಿನಲ್ಲಿ ಅರಣ್ಯಘಟಕದ ಸಿಬ್ಬಂದಿ ಇರುವುದು 15 ಮಂದಿ ಮಾತ್ರ. ಇದರಲ್ಲಿ ಕ್ಷೇತ್ರಾಧಿಕಾರಿಗಳ ಸಂಖ್ಯೆ ಏಳು. ಗಸ್ತು ತಿರುಗಬೇಕಾದ ಉಳಿದ ಎಂಟು ಮಂದಿಗೆ ಪ್ರತ್ಯೇಕ ವಾಹನವೂ ಇಲ್ಲ. ಹೀಗಾಗಿ ಮರಹನನವನ್ನು ತಡೆಯಲಾಗದೆ ಪಾಲಿಕೆ ಕೈಕಟ್ಟಿ ಕುಳಿತಿದೆ ಎನ್ನುವುದು ಅಧಿಕಾರಿಗಳ ಮಾತು. ರಾಜ್ಯ ಸರ್ಕಾರ ಈ ಲೋಪದ ಕಡೆಗೆ ತಕ್ಷಣ ಗಮನ ಹರಿಸಬೇಕು.
ಮೊದಲು ಮರ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ಮಾಡಿ, ಅಕ್ರಮವಾಗಿ ಮರ ಕಡಿಯುವವರಿಗೆ ಶಿಕ್ಷೆಯನ್ನು ಇನ್ನಷ್ಟು ಕಠಿಣಗೊಳಿಸಬೇಕು. ಮರ ಕಡಿಯಲು ಅನುಮತಿ ನೀಡುವ ಅಧಿಕಾರವನ್ನು ಮಹಾನಗರಪಾಲಿಕೆಯಿಂದ ಕಿತ್ತುಕೊಂಡು, ಅದಕ್ಕಾಗಿಯೇ ಪ್ರತ್ಯೇಕ ವ್ಯವಸ್ಥೆಯೊಂದನ್ನು ಮಾಡಬೇಕು. ತೀರಾ ಅಗತ್ಯವಾದರೆ ಮರಗಳನ್ನು ಕಡಿಯುವ ಬದಲು ಸ್ಥಳಾಂತರ ಮಾಡಲು ಕ್ರಮಗಳನ್ನು ಕೈಗೊಳ್ಳಬೇಕು.
ಬೆಂಗಳೂರಿನಲ್ಲಿ ಆಗಾಗ್ಗೆ ವನಮಹೋತ್ಸವದ ಹೆಸರಿನಲ್ಲಿ ಗಿಡಗಳನ್ನೇನೋ ನೆಡಲಾಗುತ್ತದೆ. ಆದರೆ ಅವುಗಳಲ್ಲಿ ಎಷ್ಟು ಉಳಿದು ಬೆಳೆಯುತ್ತವೆ ಎನ್ನುವ ಲೆಕ್ಕವೇ ಇಲ್ಲ. ವನಮಹೋತ್ಸವದ ಹೆಸರಿನಲ್ಲಿ ದುಡ್ಡು ಪೋಲು ಮಾಡುವ ಬದಲು, ಈ ಹಿಂದೆ ರಾಜ್ಯ ಸರ್ಕಾರ ಪ್ರಕಟಿಸಿದಂತೆ, ಬೆಂಗಳೂರಿನ ಸುತ್ತ ಇನ್ನೂ ನಾಲ್ಕು ಲಾಲ್ಬಾಗ್ ಮಾದರಿಯ ತೋಟಗಳನ್ನು ಬೆಳೆಸಲಿ. ಈ ನಿಟ್ಟಿನಲ್ಲಿ ಕಾಲಮಿತಿಯಲ್ಲಿ ಕೆಲಸ ಮಾಡಬೇಕಾದ ಅಗತ್ಯವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.