ಬೆಂಗಳೂರು: ಕಂಬಾಲಪಲ್ಲಿಯಲ್ಲಿ ನಡೆದ ದಲಿತರ ಸಜೀವ ದಹನ ಪ್ರಕರಣದ ಮರು ವಿಚಾರಣೆ ಮಾಡಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ನಗರದ ಪುರಭವನದಿಂದ ಬನಪ್ಪ ಉದ್ಯಾನದವರೆಗೆ ಪ್ರತಿಭಟನಾ ರ್್ಯಾಲಿ ನಡೆಸಿದರು.
‘ಕಂಬಾಲಪಲ್ಲಿಯಲ್ಲಿ ನಡೆದ ದಲಿತರ ಹತ್ಯೆ ಪ್ರಕರಣ ಸಂಬಂಧ 32 ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ. ಘಟನೆ ನಡೆದ 14 ವರ್ಷಗಳ ನಂತರ ಈ ತೀರ್ಪು ಬಂದಿದೆ. ತ್ವರಿತ ನ್ಯಾಯಾಲಯಗಳ ಮೂಲಕ ವಿಚಾರಣೆ ನಡೆಸದೆ ವಿಳಂಬ ಮಾಡಲಾಗಿದೆ. ಈ ಪ್ರಕರಣದಲ್ಲಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ನಡೆದುಕೊಂಡ ರೀತಿಯು ದಲಿತರ ಬಗ್ಗೆ ಇರುವ ನಿರ್ಲಕ್ಷ್ಯವನ್ನು ತೋರುತ್ತದೆ’ ಎಂದು ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಎಚ್.ಮಾರಪ್ಪ ಆರೋಪಿಸಿದರು.
‘ಹತ್ಯೆಯಂಥ ಸಮಾಜ ವಿರೋಧಿ ಕೃತ್ಯ ಎಸಗಿದವರು ಯಾವುದೇ ಕಾರಣಕ್ಕೂ ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳಬಾರದು. ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕು. ಆಗ ಮಾತ್ರ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಸಿಗುತ್ತದೆ. ಜತೆಗೆ, ಆತಂಕದಲ್ಲಿರುವ ದಲಿತರು, ಭಯವಿಲ್ಲದೆ ಜೀವನ ನಡೆಸುವಂತಾಗುತ್ತದೆ. ಆರೋಪಿಗಳು ಖುಲಾಸೆಯಾಗಿರುವುದರಿಂದ ಕಂಬಾಲಪಲ್ಲಿಯ ದಲಿತರಿಗೆ ಮತ್ತು ಪ್ರಕರಣದ ಸಾಕ್ಷಿದಾರರಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಬೇಕು’ ಎಂದು ಒತ್ತಾಯಿಸಿದರು.
ಪ್ರತಿಭಟನೆ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ಕೊಟ್ಟಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು. ಸಮಿತಿಯ ರಾಜ್ಯ ಘಟಕದ ಉಪ ಪ್ರಧಾನ ಕಾರ್ಯ-ದರ್ಶಿ ಮುನಿಬೈರಪ್ಪ, ಸಂಚಾಲಕ ಡ್ಯಾನಿಯಲ್ ಕೋಲ್ಮಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.