ರಾಮನಗರ: ಪ್ರಸ್ತುತ ದಿನಗಳಲ್ಲಿ ಮನುಷ್ಯನ ವ್ಯಾಮೋಹ ಹೆಚ್ಚಾಗುತ್ತಿದೆ. ಆದರೆ, ಹಿರಿಯರನ್ನು ಗೌರವಿಸುವ ಪ್ರವೃತ್ತಿ ಮರೆಯಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸರ್ವೇಶ್ವರ್ ಆತಂಕ ವ್ಯಕ್ತಪಡಿಸಿದರು.
ನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಅಂಗವಿಕಲರ ಹಾಗೂ ಹಿರಿಯರ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಶಾಂತಲಾ ಚಾರಿಟಬಲ್ ಟ್ರಸ್ಟಿನ ಸಹಯೋಗದಲ್ಲಿ ನಡೆದ 'ಹಿರಿಯರ ಮತ್ತು ಕಿರಿಯರ ನಡುವಿನ ಸಂಬಂಧ' ವಿಷಯದ ಕುರಿತು ನಡೆದ ಭಾಷಣ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿ ವಿಭಕ್ತ ಕುಟುಂಬಗಳೇ ಹೆಚ್ಚಾಗುತ್ತಿರುವುದು ವಿಷಾದದ ಸಂಗತಿ. ಹೆಣ್ಣು ಕುಟುಂಬದ ಏಳಿಗೆಗಾಗಿ ಶ್ರಮಿಸುತ್ತಾಳೆ. ಹೆಣ್ಣಿಗೆ ತಾಳ್ಮೆ, ಶಾಂತಿ, ಸಹನೆ ಅಗತ್ಯ. ಒಟ್ಟಾಗಿ ಬಾಳುವ ಮನೋಭಾವನೆಯನ್ನು ನಮ್ಮ ಮಕ್ಕಳಿಗೂ ಕಲಿಸಬೇಕು ಎಂದು ಹೇಳಿದರು.
ದಾರಿದೀಪ ವೃದ್ದಾಶ್ರಮದ ಸಂಸ್ಥಾಪಕಿ ಕವಿತ ರಾವ್ ಮಾತನಾಡಿ ಅಕ್ಷರಸ್ಥರು ಇಂದು ತಮ್ಮ ಪೋಷಕರನ್ನೇ ಕಡೆಗಣಿಸುತ್ತಿದ್ದಾರೆ. ಒಳ್ಳೆಯ ಶಿಕ್ಷಣ ನೀಡಿ ಸಾಕಿ ಸಲುಹಿದ ತಂದೆತಾಯಿಯರನ್ನೇ ಮನೆಯಿಂದ ಹೊರಗೆ ಹಾಕುತ್ತಿದ್ದಾರೆ. ಇದು ನಗರ ಪ್ರದೇಶಗಳಲ್ಲಿ ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹೋಲಿ ಕ್ರೆಸೆಂಟ್ ಶಾಲೆಯ ವಿದ್ಯಾರ್ಥಿನಿ ಬಿ.ಜೆ. ಶ್ರೀರಕ್ಷಾ ಪ್ರಥಮ ಸ್ಥಾನ, ಎ.ವಿ. ನಂದಿತಾ ದ್ವಿತೀಯ ಸ್ಥಾನ, ರಾಮದುರ್ಗ ಪ್ರೌಢಶಾಲೆಯ ಪ್ರಶಾಂತ್ ತೃತೀಯ ಸ್ಥಾನವನ್ನು ಪಡೆದುಕೊಂಡರು.
ತೀರ್ಪುಗಾರರಾಗಿ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಪ್ಪ, ಪುಟ್ಟಸ್ವಾಮಿ, ಅಕ್ರೆಸೆಟ್ ಸಂಸ್ಥೆಯ ಅಧ್ಯಕ್ಷ ಸಿದ್ದೇಗೌಡ, ಶಾಂತಲಾ ಚಾರಿಟಬಲ್ ಟ್ರಸ್ಟಿನ ಅಧ್ಯಕ್ಷ ನಾಗೇಂದ್ರರಾವ್ ಎಸ್ಬಿಎಂ ಲೋಕೇಶ್ ಇತರರು ಉಪಸ್ಥಿತರಿದ್ದರು. ಗಾಯಕ ಗಂಗಾಧರಯ್ಯ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಚಿತ್ರರಾವ್ ನಿರೂಪಿಸಿದರು.
***
ಮಕ್ಕಳಿಗೆ ಪೋಷಕರು ಉತ್ತಮ ಶಿಕ್ಷಣ ಕೊಡಿಸುವ ಜತೆಗೆ ಮಾನವೀಯ ಮೌಲ್ಯಗಳನ್ನು ಕಲಿಸಬೇಕು. ಅಕ್ಷರ ಜ್ಞಾನದ ಜತೆಗೆ ಲೋಕಜ್ಞಾನವನ್ನು ಕಲಿಸಬೇಕು.
-ಮಂಗಳಾ ನಾಯಕ್, ಶಿಕ್ಷಕಿ