ಬೆಂಗಳೂರು: ರಾಜ್ಯದ ಮಲೆನಾಡು ಪ್ರದೇಶದಲ್ಲಿ ಭಾರಿ ಮಳೆ ಬುಧವಾರವೂ ಮುಂದುವರಿದಿದೆ. ಕೊಡಗು ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆಯನ್ನು ಗುರುವಾರದವರೆಗೆ ವಿಸ್ತರಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಶಾಲಾ ಕಾಲೇಜುಗಳಿಗೆ ಬುಧವಾರ ರಜೆ ಸಾರಲಾಗಿತ್ತು. ಸಾಗರ ತಾಲ್ಲೂಕಿನಲ್ಲಿ ವರದಾ ನದಿ ಪ್ರವಾಹದಿಂದ ಸುಮಾರು 1100 ಎಕರೆ ಕೃಷಿ ಭೂಮಿ ಜಲಾವೃತಗೊಂಡಿದೆ.
ಬೆಳಗಾವಿ ವರದಿ: ಜಿಲ್ಲೆಯ ಖಾನಾಪುರ ತಾಲ್ಲೂಕಿನಲ್ಲಿ ಭಾರಿ ಮಳೆಯಿಂದಾಗಿ ಮಂತುರ್ಗಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಲಾತ್ರಿ ಹಳ್ಳದಲ್ಲಿ ಪ್ರವಾಹ ಉಂಟಾಗಿರುವುದರಿಂದ ಬುಧವಾರ 40ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತವಾಗಿದೆ.
ಮಹಾರಾಷ್ಟ್ರದ ವಿವಿಧ ಜಲಾಶಯ, ಬ್ಯಾರೇಜ್ಗಳಿಂದ ಕೃಷ್ಣಾ ಮತ್ತು ಅದರ ಉಪನದಿಗಳಿಗೆ ಒಟ್ಟು 90,663 ಕ್ಯೂಸೆಕ್ ನೀರು ಬಿಡಲಾಗಿದೆ.
ಯಲ್ಲಾಪುರ ವರದಿ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆ ಮುಂದುವರಿದ್ದು ಶಿರಸಿ, ಸಿದ್ದಾಪುರ, ಯಲ್ಲಾಪುರ ಮತ್ತಿತರ ಕಡೆಗಳಲ್ಲಿ ಕೆಲವೆಡೆ ಅಡಿಕೆ, ತೆಂಗಿನ ಮರಗಳು ಉರುಳಿ ಬಿದ್ದು ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಹುಬ್ಬಳ್ಳಿ–ಧಾರವಾಡದಲ್ಲಿ ಬೆಳಿಗ್ಗೆಯಿಂದ ಸತತವಾಗಿ ಮಳೆ ಸುರಿದಿದೆ. ಬೆಳಗಾವಿ, ಗದಗ, ವಿಜಾಪುರ ಜಿಲ್ಲೆಗಳಲ್ಲೂ ಮಳೆಯಾಗಿದೆ.
ಮಡಿಕೇರಿ ವರದಿ: ಭಾಗಮಂಡಲದಲ್ಲಿ ಕನ್ನಿಕಾ ಉಪನದಿ ತುಂಬಿ ಹರಿಯುತ್ತಿರುವುದರಿಂದ ಕೆಲ ಹೊತ್ತು ಮಡಿಕೇರಿ ರಸ್ತೆ ಜಲಾವೃತಗೊಂಡಿತ್ತು. ದಕ್ಷಿಣ ಕೊಡಗಿನಲ್ಲಿ ಲಕ್ಷ್ಮಣತೀರ್ಥ ನದಿ ರಭಸದಿಂದ ಹರಿಯುತ್ತಿದೆ. ಬಾಳೆಲೆ– ನಿಟ್ಟೂರು ಸೇತುವೆ ಈಗಲೂ ನೀರಿನಲ್ಲಿ ಮುಳುಗಿದೆ.
ಚಿಕ್ಕಮಗಳೂರು ವರದಿ: ಜಿಲ್ಲೆಯಾದ್ಯಂತ ಮುಂಗಾರು ಮಳೆ ಮುಂದುವರಿದಿದ್ದು, ಬುಧವಾರ ಇಡೀ ದಿನ ಧಾರಾಕಾರ ಮಳೆ ಸುರಿಯಿತು.
ನಾಲ್ಕೈದು ದಿನಗಳಿಂದ ನಗರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ತುಂತುರಿನಂತೆ ಸುರಿಯುತ್ತಿದ್ದ ಮಳೆ, ಬುಧವಾರ ಮಧ್ಯಾಹ್ನದ ನಂತರ ಅಬ್ಬರ ಪಡೆದುಕೊಂಡಿದೆ. ಇಡೀ ದಿನ ಬಹುತೇಕ ರೈತರಿಗೆ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆ ನಡೆಸಲು ಮಳೆ ಆಸ್ಪದ ನೀಡಲಿಲ್ಲ.
ಶಿವಮೊಗ್ಗ ವರದಿ: ಸಾಗರ ತಾಲ್ಲೂಕಿನಲ್ಲಿ ಬುಧವಾರ ಭಾರಿ ಮಳೆಯಾಗಿದ್ದು ತಾಳಗುಪ್ಪ ಹೋಬಳಿಯ ಕಾನ್ಲೆ, ಮಂಡಗಳಲೆ, ಸೈದೂರು ಸುತ್ತಮುತ್ತಲ ಗ್ರಾಮಗಳ 1100 ಎಕರೆ ಕೃಷಿ ಭೂಮಿ ವರದಾ ನದಿ ಪ್ರವಾಹದಿಂದ ಸಂಪೂರ್ಣವಾಗಿ ಜಲಾವೃತಗೊಂಡಿದೆ.
ಶಾಲೆಗೆ ರಜೆ: ಸಾಗರ ತಾಲ್ಲೂಕಿನಲ್ಲಿ ಮಳೆ ಮುಂದುವರಿದರೆ ಶಾಲಾ ಕಾಲೇಜುಗಳಿಗೆ ರಜೆಯನ್ನು ಗುರುವಾರವೂ ಮುಂದುವರಿಸುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಕೆ.ಆರ್.ಎಸ್. ಗೆ ಒಂದೇ ದಿನ ಮೂರು ಅಡಿ ನೀರು
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೆ.ಆರ್.ಎಸ್. ಅಣೆಕಟ್ಟೆಗೆ ಬುಧವಾರ 3 ಅಡಿಗಳಷ್ಟು ನೀರು ಬಂದಿದೆ. ಮಂಗಳವಾರ 103.60 ಅಡಿಯಷ್ಟಿದ್ದ ನೀರು ಬುಧವಾರ ಸಂಜೆಯ ವೇಳೆಗೆ 106.60 ಅಡಿಗೆ ಏರಿದೆ. ಒಳ ಹರಿವು 35,373 ಕ್ಯೂಸೆಕ್ಗೆ ಹೆಚ್ಚಿದೆ. ಹೊರ ಹರಿವನ್ನು 6,437 ಕ್ಯೂಸೆಕ್ಗೆ ಹೆಚ್ಚಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.