ಬೆಂಗಳೂರು: ನಗರದ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಸಂಶೋಧಕರ ತಂಡ ಮಲೇರಿಯಾ ರೋಗ ಪತ್ತೆ ಮಾಡುವ ಪುಟ್ಟ ಉಪಕರಣವೊಂದನ್ನು ಕಂಡು ಹಿಡಿದಿದೆ. ಈ ಉಪಕರಣ ಕೇವಲ 30 ನಿಮಿಷಗಳಲ್ಲಿ ರೋಗವನ್ನು ನಿಖರವಾಗಿ ಪತ್ತೆ ಮಾಡಿ ಫಲಿತಾಂಶ ನೀಡಲಿದೆ.
ದೆಹಲಿಯಲ್ಲಿ ಇತ್ತೀಚೆಗೆ ಜೈವಿಕ ತಂತ್ರಜ್ಞಾನ ಕೈಗಾರಿಕೆ ಸಂಶೋಧನಾ ಸಹಾಯಕ ಪರಿಷತ್ (ಬಿಐಆರ್ಎಸಿ) ಏರ್ಪಡಿಸಿದ್ದ ಹೊಸ ಅನ್ವೇಷಣೆಗಳ ಪ್ರದರ್ಶನದಲ್ಲಿ ಈ ಉಪಕರಣಕ್ಕೆ ‘ಉತ್ತಮ ಆವಿಷ್ಕಾರ’ ಪ್ರಶಸ್ತಿ ಸಹ ಲಭಿಸಿದೆ. ಐಐಎಸ್ಸಿಯ ಅನ್ವಯಿಕ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಾಯಿ ಶಿವ ಗೊರ್ತಿ ಅವರ ನೇತೃತ್ವದ ಸಂಶೋಧಕರ ತಂಡ ಈ ಉಪಕರಣವನ್ನು ಶೋಧಿಸಿದೆ. ಸಂಸ್ಥೆಯ ಆವರಣದಲ್ಲಿರುವ ರಾಬರ್ಟ್ ಬಾಷ್ ಸೈಬರ್ ಫಿಸಿಕಲ್ ಸಿಸ್ಟಮ್ಸ್ ಕೇಂದ್ರದಲ್ಲಿ (ಆರ್ಬಿಸಿಸಿಪಿಎಸ್) ಅದನ್ನು ಅಭಿವೃದ್ಧಿಪಡಿಸಲಾಗಿದೆ.
ಈ ಸಂಶೋಧನೆಗೆ ಬಿಐಆರ್ಎಸಿ ಧನ ಸಹಾಯ ನೀಡಿತ್ತು. ಯಾವ ಸಂಸ್ಥೆಗಳಿಗೆ ಈ ಧನ ಸಹಾಯ ಕೊಡಬೇಕು ಎಂಬುದನ್ನು ನಿರ್ಧರಿಸಲು ಸುದೀರ್ಘ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಮೌಲ್ಯ ಮಾಪನದ ವರದಿ ಆಧಾರಿಸಿ ಆರ್ಥಿಕ ನೆರವು ಘೋಷಿಸಲಾಗುತ್ತದೆ.
ಸೊಳ್ಳೆಗಳಿಂದ ಹರಡುವ ಮಲೇರಿಯಾ ಅಭಿವೃದ್ಧಿ ಹೊಂದುತ್ತಿರುವ ದೇಶಗಳನ್ನು ಕಾಡುತ್ತಿರುವ ಪ್ರಮುಖ ಕಾಯಿಲೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್ಒ) ದಾಖಲೆಗಳ ಪ್ರಕಾರ, 2012ನೇ ಸಾಲಿನಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯೋಮಾನದ 4.82 ಲಕ್ಷ ಮಕ್ಕಳು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಅಂದರೆ ಮಲೇರಿಯಾ ರೋಗವು ಪ್ರತಿ ನಿಮಿಷಕ್ಕೆ ಒಂದು ಮಗುವನ್ನು ಬಲಿ ಪಡೆದಿದೆ ಎಂದರ್ಥ.
2011ರಲ್ಲಿ ನಮ್ಮ ದೇಶದಲ್ಲಿ 13 ಲಕ್ಷ ಮಲೇರಿಯಾ ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 754 ಜನ ಸಾವನ್ನಪ್ಪಿದ್ದರು. ಮಲೇರಿಯಾದ ಗಾಂಭೀರ್ಯವನ್ನು ಅರಿಯಲು ಇದಕ್ಕಿಂತ ಬೇರೆ ಅಂಕಿ–ಸಂಖ್ಯೆಗಳು ಬೇಕೆ?
ಡಾ. ಗೊರ್ತಿ ಅವರ ತಂಡ ಮಲೇರಿಯಾ ಪತ್ತೆ ಉಪಕರಣ ಶೋಧಿಸಲು ಕಾಯಿಲೆಯೊಂದಿಗೆ ತಳಕು ಹಾಕಿಕೊಂಡ ಈ ಗಂಭೀರ ಸಮಸ್ಯೆಗಳೇ ಕಾರಣ. ಒಂದು ತೊಟ್ಟು ರಕ್ತದ ಮಾದರಿ ಪಡೆದು ಅದರಲ್ಲಿನ ಜೀವಕೋಶಗಳ ವಿಶ್ಲೇಷಣೆ ನಡೆಸಿ, ಮಲೇರಿಯಾ ಬಾಧಿತ ಕಣಗಳು ಅದರಲ್ಲಿವೆಯೇ ಎನ್ನುವುದನ್ನು ಪತ್ತೆ ಮಾಡುವುದು ಈ ಕಡಿಮೆ ವೆಚ್ಚದ ಅದರ ಕೆಲಸ. ಅಂಗೈಯಲ್ಲಿ ಹಿಡಿಯಲು ಸಾಧ್ಯವಿರುವ ಪುಟ್ಟ ಗಾತ್ರ ಉಪಕರಣ ಅದಾಗಿದೆ.
‘ಸಂಪೂರ್ಣ ಸ್ವಯಂಚಾಲಿತವಾದ ಈ ಉಪಕರಣದ ಕಾರ್ಯವೈಖರಿ ನೋಡಿ ನಮಗೆ ತುಂಬಾ ಖುಷಿಯಾಗಿದೆ. ವೈದ್ಯಕೀಯ ಅಗತ್ಯಗಳನ್ನು ಪೂರೈಸಬಲ್ಲ ಈ ಉಪಕರಣ ನಿಖರ ಫಲಿತಾಂಶವನ್ನೂ ನೀಡಲಿದೆ. ಆಸ್ಪತ್ರೆಗಳಲ್ಲಿ ಅತ್ಯಂತ ಮಹತ್ವದ ಸಾಧನ ಇದಾಗಲಿದೆ’ ಎಂದು ಹೇಳುತ್ತಾರೆ ಆರ್ಬಿಸಿಸಿಪಿಎಸ್ನ ಹೆಲ್ತ್ಕೇರ್ ವಿಭಾಗದ ಮುಖ್ಯಸ್ಥರಾದ ಡಾ. ಪರಮ ಪಾಲ್.
ಭಾರತ ಹಳ್ಳಿಗಳ ರಾಷ್ಟ್ರ. ಪ್ರತಿಯೊಂದು ಹಳ್ಳಿಯಲ್ಲಿ ಸಮರ್ಪಕ ಆರೋಗ್ಯ ವ್ಯವಸ್ಥೆ ಈಗಲೂ ಬಹುದೊಡ್ಡ ಸವಾಲಾಗಿದೆ. ರೋಗ ಪತ್ತೆಗಾಗಿ ಹಳ್ಳಿಗಳ ಜನ ನಗರಗಳಿಗೆ ಅಲೆಯುವುದು ಅನಿವಾರ್ಯವಾಗಿದೆ. ರಕ್ತದ ಮಾದರಿ ಪಡೆದು ಸೂಕ್ಷ್ಮದರ್ಶಕದಲ್ಲಿ ಅದರ ವಿಶ್ಲೇಷಣೆ ನಡೆಸಿ, ವರದಿ ನೀಡಲು ಪ್ರಯೋಗಾಲಯದಲ್ಲಿ ಒಂದು ದಿನವೇ ವ್ಯಯವಾಗುತ್ತದೆ. ಇದರಿಂದ ಚಿಕಿತ್ಸೆ ನಿಧಾನವಾಗುತ್ತಿದೆ. ರೋಗಪತ್ತೆ ಹಾಗೂ ಚಿಕಿತ್ಸೆಯಲ್ಲಿ ಆಗುವ ವಿಳಂಬದಿಂದ ಹಳ್ಳಿಗರ ‘ದುಡಿಮೆ ದಿನಗಳು’ ಇನ್ನಷ್ಟು ಕಡಿಮೆ ಆಗುತ್ತಿವೆ.
‘ನಮ್ಮ ಸಂಶೋಧನೆಯು ಬಹು ತಂತ್ರಜ್ಞಾನವನ್ನು ಒಳಗೊಂಡಿದೆ. ಇಮೇಜ್ ಪ್ರೊಸೆಸಿಂಗ್, ಮೈಕ್ರೊಫ್ಲ್ಯೂಡಿಕ್ಸ್ ಮತ್ತು ಮೈಕ್ರೊಸ್ಕೊಪಿ ತಂತ್ರಜ್ಞಾನದ ಮೂಲಕ ರಕ್ತದ ಕಣಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗುತ್ತದೆ. ಹೀಗಾಗಿ ಅದೊಂದು ಉಪಕರಣ ರೂಪದ ಪ್ರಯೋಗಾಲಯವೇ ಆಗಿದೆ’ ಎನ್ನುತ್ತಾರೆ ಗೊರ್ತಿ.
‘ಸಾಂಪ್ರದಾಯಿಕ ಪರೀಕ್ಷಾ ವಿಧಾನಕ್ಕೆ ಹೋಲಿಸಿದರೆ ಈ ಉಪಕರಣದಲ್ಲಿ ತಪಾಸಣೆ ನಡೆಸಲು ತುಂಬಾ ಕಡಿಮೆ ಪ್ರಮಾಣದ ರಕ್ತದ ಮಾದರಿ ಸಾಕು. ಸಾಮಾನ್ಯವಾಗಿ 200 ನ್ಯಾನೊ ಲೀಟರ್ ರಕ್ತವನ್ನು ಪಡೆಯಲಾಗುತ್ತದೆ. ಅದರಲ್ಲಿ ಹತ್ತು ಲಕ್ಷಕ್ಕೂ ಅಧಿಕ ರಕ್ತದ ಕಣಗಳು ಇರುತ್ತವೆ. ಪ್ರತಿಯೊಂದು ಕಣವನ್ನೂ ವಿಶ್ಲೇಷಣೆಗೆ ಒಳಪಡಿಸುವ ಈ ಉಪಕರಣ, ಅದರಲ್ಲಿರುವ ಮಲೇರಿಯಾ ಬಾಧಿತ ಕಣಗಳನ್ನು ಪತ್ತೆ ಮಾಡುತ್ತದೆ. ಅದರ ಪರದೆ ಮೇಲೆ ಕಣಗಳ ಚಿತ್ರಣವನ್ನು ತೆರೆದಿಡುತ್ತದೆ. ರೋಗಿಯು ಮಲೇರಿಯಾದಿಂದ ಬಳಲುತ್ತಿರುವನೋ ಹೇಗೋ ಎಂಬುದು ತಕ್ಷಣವೇ ತಿಳಿದುಬಿಡುತ್ತದೆ’ ಎಂದು ಅವರು ವಿವರಿಸುತ್ತಾರೆ.
‘ಸ್ಮಾರ್ಟ್ ಫೋನ್ ರೂಪದ ಈ ಉಪಕರಣದ ನಿರ್ವಹಣೆಗೆ ಯಾವ ತಂತ್ರಜ್ಞರ ಅಗತ್ಯವೂ ಇಲ್ಲ. ಎಲ್ಲವನ್ನೂ ಅದು ಸ್ವಯಂಚಾಲಿತವಾಗಿ ಮಾಡಲಿದೆ. ರಕ್ತದ ಕಣಗಳನ್ನು ವಿಶ್ಲೇಷಿಸಿ ಫಲಿತಾಂಶ ಹೇಳಲು ಉಪಕರಣಕ್ಕೆ 30 ನಿಮಿಷ ಬೇಕು. ಬೇರೆ ರೋಗಗಳ ಪತ್ತೆಗೆ ಬೇಕಾದ ಬದಲಾವಣೆಯನ್ನು ಸಹ ಈ ಉಪಕರಣದಲ್ಲಿ ಮಾಡಲು ಸಾಧ್ಯ’ ಎಂದು ಗೊರ್ತಿ ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.