ನವದೆಹಲಿ: ಬ್ಯಾಂಕುಗಳಿಗೆ ಸಾಲ ಬಾಕಿ ಇರಿಸಿ ವಿದೇಶಕ್ಕೆ ತೆರಳಿರುವ ಉದ್ಯಮಿ ವಿಜಯ ಮಲ್ಯ ಅವರ ವಿರುದ್ಧ ಶಿಸ್ತುಕ್ರಮದ ಶಿಫಾರಸು ವರದಿಯನ್ನು ರಾಜ್ಯಸಭೆಯ ನೀತಿ ಸಮಿತಿಯು ಬುಧವಾರ ಮಂಡಿಸಲಿದೆ. ಮಲ್ಯ ಅವರನ್ನು ಸದಸ್ಯತ್ವದಿಂದ ಉಚ್ಚಾಟಿಸುವ ನಿಲುವಿಗೆ ಸಮಿತಿ ಬದ್ಧವಾಗಿರಲಿದೆ ಎನ್ನಲಾಗಿದೆ.
ಕಾಂಗ್ರೆಸ್ ಸಂಸದ ಕರಣ್ ಸಿಂಗ್ ನೇತೃತ್ವದ ಸಮಿತಿಯು ವಿಷಯಕ್ಕೆ ಸಂಬಂಧಿಸಿದ ಸಮಾಲೋಚನೆಯನ್ನು ಮಂಗಳವಾರ ಪೂರ್ಣಗೊಳಿಸಿದೆ. ಉಚ್ಚಾಟನೆಯಿಂದ ತಪ್ಪಿಸಿಕೊಳ್ಳಲಾಗದು ಎಂಬುದನ್ನು ಊಹಿಸಿರುವ ಮಲ್ಯ ಅವರು ಸೋಮವಾರವೇ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಆದರೆ, ಸಭಾಪತಿ ಹಮೀದ್ ಅನ್ಸಾರಿ ಅವರು ರಾಜೀನಾಮೆ ಪತ್ರವನ್ನು ಮಂಗಳವಾರ ತಿರಸ್ಕರಿಸಿದ್ದಾರೆ.
‘ವಿಜಯ ಮಲ್ಯ ನೀಡಿರುವ ರಾಜೀನಾಮೆಯನ್ನು ಹಮೀದ್ ಅನ್ಸಾರಿ ಸ್ವೀಕರಿಸಿಲ್ಲ. ರಾಜೀನಾಮೆ ಪತ್ರ ನಿಯಮಗಳಿಗೆ ಅನುಗುಣವಾಗಿ ಇಲ್ಲ. ಪತ್ರವು ಮಲ್ಯ ಅವರ ಮೂಲ ಸಹಿಯನ್ನು ಹೊಂದಿಲ್ಲ’ ಎಂದು ರಾಜ್ಯ ಸಭೆಯ ಪ್ರಧಾನ ಕಾರ್ಯದರ್ಶಿ ಹೇಳಿಕೆಯನ್ನು ಉಲ್ಲೇಖಿಸಿ ಅನ್ಸಾರಿ ವಿಶೇಷಾಧಿಕಾರಿ ಟ್ವೀಟ್ ಮಾಡಿದ್ದಾರೆ.
ಇಂದು ನಿರ್ಧಾರ: ರಾಜ್ಯಸಭೆಯ ನೀತಿ ಸಮಿತಿಯ ಶಿಫಾರಸಿನ ಆಧಾರದಲ್ಲಿ ರಾಜ್ಯಸಭೆಯ ಸಭಾಪತಿ ಹಮೀದ್ ಅನ್ಸಾರಿ ಅವರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಮಲ್ಯ ಅವರ ರಾಜ್ಯಸಭಾ ಸದಸ್ಯತ್ವದ ಅವಧಿ ಜೂನ್ 30ಕ್ಕೆ ಕೊನೆಗೊಳ್ಳಲಿದೆ.
ತಮ್ಮನ್ನು ಸದಸ್ಯತ್ವದಿಂದ ಉಚ್ಚಾಟನೆ ಮಾಡಲು ನೀತಿ ಸಮಿತಿಗೆ ಅಧಿಕಾರ ಇಲ್ಲ ಎಂದು ತಮ್ಮ ಪ್ರತಿಕ್ರಿಯೆಯಲ್ಲಿ ಮಲ್ಯ ವಾದಿಸಿದ್ದಾರೆ ಎಂದು ತಿಳಿದು ಬಂದಿದೆ.