ಹೊಸಕೋಟೆ: ತಾಲ್ಲೂಕಿನಾದ್ಯಂತ ಕಳೆದ ಇಪ್ಪತ್ತು ದಿನಗಳಿಂದ ಬೀಳುತ್ತಿರುವ ಜಿಟಿಜಿಟಿ ಮಳೆಗೆ ರಾಗಿ ಬೆಳೆ ಸಂಪೂರ್ಣ ನೆಲ ಕಚ್ಚಿದ್ದು ರೈತರಿಗೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.
ಇನ್ನೇನು ಬೆಳೆ ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ಎಡೆಬಿಡದೆ ಬಂದ ಮಳೆ ಗೆ ಬೆಳೆ ಹಾಳಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಮಳೆಯಿಂದ ರಾಗಿ ತೆನೆ ನೆಲಕ್ಕೆ ಬಿದ್ದು ಅಲ್ಲಿಯೆ ಮೊಳಕೆ ಒಡದಿದೆ. ರಾಗಿ ಕಡ್ಡಿ ಸಹ ಹಾಳಾಗಿದ್ದು ದನಗಳು ಸಹ ಅದನ್ನು ತಿನ್ನದಾಗಿದೆ. ಹಾಗಾಗಿ ರೈತರಿಗೆ ರಾಗಿ ಬೆಳೆ ನಷ್ಟದ ಜತೆಗೆ ಮೇವಿನ ಕೊರತೆಯೂ ಎದುರಾಗಿದೆ.
‘ಒಂದೂವರೆ ಎಕರೆ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಿದ್ದೆ. ಇದಕ್ಕಾಗಿ ಸುಮಾರು ₹30 ಸಾವಿರ ವೆಚ್ಚ ಆಗಿತ್ತು. ಉತ್ತಮವಾಗಿ ಬೆಳೆ ಬೆಳೆದು ನಿಂತಿತ್ತು. ಕಟಾವಿನ ಹಂತದಲ್ಲಿತ್ತು. ಇನ್ನೇನು ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ಮಳೆ ಬಿದ್ದು ಬೆಳೆ ಹಾಳಾಗಿದೆ’ ಎಂದು ಇಲ್ಲಿನ ಕಣ್ಣೂರಹಳ್ಳಿ ರಸ್ತೆಯ ನಿವಾಸಿ, ರೈತ ಗಣೇಶ್ ಅಳಲು ತೋಡಿಕೊಂಡರು.