ಗದಗ: ನಿರಂತರವಾಗಿ ಸುರಿದ ಭಾರಿ ಮಳೆಯಿಂದ ಜಿಲ್ಲೆಯಲ್ಲಿ 1627 ಮನೆಗಳು ಜಖಂಗೊಂಡು ಮಳೆಯಿಂದ ಭೂಮಿಯಲ್ಲಿ ಬೆಳೆದ ನಿಂತ ಬೆಳೆಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಅವರು ಸಮೀಪದ ಬಸಾಪುರ ಗ್ರಾಮದಲ್ಲಿ ಮಳೆಯಿಂದ ಹಾನಿಗಿಡಾದ ಪ್ರದೇಶಗಳಿಗೆ ಭೆೇಟಿ ನೀಡಿ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ, ಮುಳಗುಂದ ಗ್ರಾಮದಲ್ಲಿ ಕಳೆದ 40 ದಿನಗಳಿಂದ ಮಳೆ ಸುರಿಯುತ್ತಿದ್ದು ಗ್ರಾಮದಲ್ಲಿ 50ಕ್ಕೂ ಹೆಚ್ಚು ಮಣ್ಣಿನ ಮನೆ, ಗೋಡೆ, ಮೇಲ್ಚಾವಣೆ ಕುಸಿದು ಬಿದ್ದಿವೆ. ತಾತ್ಕಾಲಿಕ ಪರಿಹಾರವಾಗಿ ₨ 20 ಸಾವಿರಗಳಿಂದ ₨ 40 ಸಾವಿರ ದವರೆಗೆ ಸಂತ್ರಸ್ಥರಿಗೆ ನೀಡಲಾಗಿದೆ. ಜಿಲ್ಲಾಡಳಿತದ ಹತ್ತಿರ ಪ್ರಕೃತಿ ವಿಕೋಪ ಪರಿಹಾರಕ್ಕಾಗಿ ₨ 7.80 ಕೋಟಿ ಇದ್ದು ಹಣದ ಕೊರತೆ ಇಲ್ಲ ಎಂದು ಸ್ಪಷ್ಟ ಪಡಿಸಿದರು.
ಗದಗ ತಾಲ್ಲೂಕಿನ 3,434 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯನ್ನು ಸದ್ಯಕ್ಕೆ ಅಂದಾಜಿಸಲಾಗಿದೆ. ಬಿಟಿ ಹತ್ತಿ, ಗೋವಿನ ಜೋಳ, ಹೆಸರು ಬೆಳೆಗಳಿಗೆ ಹೆಚ್ಚಿನ ಹಾನಿಯಾಗಿದೆ. ಗದಗ ಹೋಬ ಳಿಯಲ್ಲಿ ಹೆಚ್ಚಿನ ಬೆಳೆ ಹಾನಿಯಾಗಿದ್ದು ಹೊಂಬಳ, ಮದಗಾನೂರ, ಶ್ಯಾಗೋಟಿ ಮತ್ತು ಚಿಕ್ಕಹಂದಿಗೋಳ ಪ್ರದೇಶದಲ್ಲಿ ಹೆಚ್ಚಿನ ಹಾನಿ ಅಂದಾಜಿಸಲಾಗಿದೆ.
ಭೂಮಿಯಲ್ಲಿ ಬೆಳೆದ ನಿಂತ ಬೆಳೆ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾ ಗಿದ್ದು ಕಂದಾಯ ಹಾಗೂ ಕೃಷಿ ಇಲಾಖೆಯ ಸಹಯೋಗದಲ್ಲಿ ಸಮೀಕ್ಷೆ ನಡೆಸುವಂತೆ ನಿರ್ದೇಶನ ನೀಡಲಾಗಿದ್ದು ಸಮೀಕ್ಷೆ ನಂತರ ಪರಿಹಾರ ನೀಡಲಾಗು ವುದು. ಈಗಾಗಲೇ ಮುಖ್ಯಮಂತ್ರಿ ಸಿದ್ದ ರಾಮಯ್ಯನವರು ಸಂತ್ರಸ್ಥರಿಗೆ ಸೂಕ್ತ ಪರಿಹಾರ ನೀಡುವಂತೆ ಸೂಚಿಸಿದ್ದಾರೆ ಎಂದು ಹೇಳಿದರು.
ಇದಕ್ಕೂ ಮುನ್ನ ಮುಳಗುಂದ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವ ಎಚ್.ಕೆ.ಪಾಟೀಲ ಕುಸಿದ ಮನೆಗಳನ್ನು ವೀಕ್ಷಿಸಿ ಅಹವಾಲುಗಳನ್ನು ಆಲಿಸಿದರು.
ಕುಂಬಾರಗೇರಿಯ ಬಸವರಾಜ ಚೆನಬಸಪ್ಪ ಕುಂಬಾರ ಕುಟುಂಬಕ್ಕೆ ಮಳೆಯಿಂದಾಗಿ ಕುಸಿದ ಮನೆಯ ಪರಿಹಾರವಾಗಿ ₨ 30 ಸಾವಿರ ಮತ್ತು ಅಂಬೇಡ್ಕರ್ ನಗರದ ಲಕ್ಷಮವ್ವ ದುರಗಪ್ಪ ದೊಡ್ಡಮನಿ ಅವರಿಗೆ ₨ 35 ಸಾವಿರದ ಚೆಕ್ ವಿತರಿಸಿದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವ ಹಣಾಧಿಕಾರಿ ಎಚ್.ಬಿ.ಶೆಟ್ಟೆ ನ್ನವರ, ಉಪವಿಭಾಗಾಧಿಕಾರಿ ಐ.ಜಿ. ಗದ್ಯಾಳ, ಕೃಷಿ ಜಂಟಿನಿರ್ದೇಶಕ ಸಿ.ಬಿ. ಬಾಲರೆಡ್ಡಿ, ಗದಗ ತಹಶೀಲ್ದಾರ ಎನ್.ಪಿ.ಬಿರಾದಾರ, ಕೃಷಿ ಸಹಾಯಕ ನಿರ್ದೇಶಕ ಸೌದತ್ತಿ, ಹಿರಿಯರಾದ ಸಿ.ವಿ.ಬಡ್ನಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.