ನ್ಯಾ. ಜೆ.ಎಂ. ಪಾಂಚಾಲ್ ಅವರು ರಾಜ್ಯದ ಅರ್ಜಿಯನ್ನು ತಿರಸ್ಕರಿಸಿದ್ದು, 7 ಟಿಎಂಸಿ ನೀರು ನೀಡಲು ಸಾಧ್ಯವಿಲ್ಲ ಎಂದು ಮಧ್ಯಂತರ ತೀರ್ಪಿನಲ್ಲಿ ಹೇಳಿದ್ದಾರೆ. ಇದರಿಂದ ಕರ್ನಾಟಕಕ್ಕೆ ಹಿನ್ನಡೆಯಾದಂತಾಗಿದೆ. ಇದರ ಮುಂದಿನ ವಿಚಾರಣೆ ಆಗಸ್ಟ್ 30ರಂದು ನಡೆಯಲಿದೆ.
ಕಳಸಾ– ಬಂಡೂರಿ ನಾಲಾ ಮೂಲಕ ಮಹಾದಾಯಿ ನದಿ ನೀರನ್ನು ಮಲಪ್ರಭಾಕ್ಕೆ ಹರಿಸಿ, ರಾಜ್ಯದ ನಾಲ್ಕು ಜಿಲ್ಲೆಗಳ ಜನತೆಗೆ ಕುಡಿಯುವ ನೀರು ಪೂರೈಸಬೇಕೆಂದು ರೈತ ಸಂಘಟನೆಗಳು ಸತತವಾಗಿ ಪ್ರತಿಭಟನೆ ನಡೆಸಿದ್ದವು. ನದಿಯ ನೀರನ್ನು ಮಲಪ್ರಭಾಗೆ ಹರಿಸಲು ಗೋವಾ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿ ಕೇಂದ್ರ ಸರ್ಕಾರದ ಮೊರೆಹೋಗಿತ್ತು. ಇದಕ್ಕೆ ಸ್ಪಂದಿಸಿದ ಕೇಂದ್ರವು ಮಹಾದಾಯಿ ನ್ಯಾಯಮಂಡಳಿ ರಚಿಸಿತ್ತು. ಎರಡೂ ರಾಜ್ಯಗಳ ಪರ ವಾದವನ್ನು ಆಲಿಸಿರುವ ನ್ಯಾಯಮಂಡಳಿ ಇಂದು ಮಧ್ಯಂತರ ತೀರ್ಪು ಪ್ರಕಟಿಸಿತು.
ರಾಜ್ಯದ ಪರ ಹಿರಿಯ ವಕೀಲ ನಾರಿಮನ್ ವಾದ ಮಂಡಿಸಿದ್ದರು.
ವ್ಯಾಪಕ ಆಕ್ರೋಶ: ನ್ಯಾಯಮಂಡಳಿಯ ಮಧ್ಯಂತರ ತೀರ್ಪು ಪ್ರಕಟವಾಗುತ್ತಿದ್ದಂತೆ ಹುಬ್ಬಳ್ಳಿ, ಬೆಳಗಾವಿ, ಧಾರವಾಡ, ಗದಗದಲ್ಲಿ ಕನ್ನಡ ಪರ ಸಂಘಟನೆಗಳು, ಮತ್ತು ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಟೈರ್ಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.