ಮುಂಬೈ (ಪಿಟಿಐ): ಬಾಳ ಠಾಕ್ರೆ ಅವರು ಹಿಂದೂತ್ವದ ಪರ ಸೆಟೆದು ನಿಂತಿದ್ದರಿಂದ ಅವರ ಪ್ರಭಾವದ ಲಾಭ ಪಡೆದು ಅನೇಕರು ರಾಜಕೀಯವಾಗಿ ಬೆಳೆದರು. ಆದರೆ ಮಹಾರಾಷ್ಟ್ರದಮೇಲೆ ಸವಾರಿ ಮಾಡಲು ಬಂದವರು ಮಣ್ಣು ಮುಕ್ಕಿದ್ದಾರೆ ಎಂಬುದನ್ನು ಮರೆಯಬಾರದು ಎಂದು ಶಿವಸೇನೆಯು ಪರೋಕ್ಷವಾಗಿ ತನ್ನ ಮಾಜಿ ಮಿತ್ರಪಕ್ಷ ಬಿಜೆಪಿಗೆ ಎಚ್ಚರಿಕೆ ನೀಡಿದೆ.
ಠಾಕ್ರೆ ಪ್ರಭಾವದಿಂದ ಬಿಜೆಪಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈಗ ನಡೆಯುವ ವಿಧಾನಸಭೆ ಚುನಾವಣೆ ಆತ್ಮಗೌರವ ಕಾಪಾಡುವ ಹೋರಾಟವಾಗಿದೆ ಎಂದು ಶಿವಸೇನೆ ಮುಖವಾಣಿ ‘ಸಾಮ್ನಾ’ದಲ್ಲಿ ಬರೆಯಲಾಗಿದೆ.
‘ಶಿವಾಜಿ ಮಹಾರಾಜನ ನಂತರ ಬಾಳ ಠಾಕ್ರೆ ಅವರೇ ಹಿಂದೂತ್ವವನ್ನು ಕಾಪಾಡಿದರು. ಆದರೆ ಕೆಲವರು ಬಾಯಲ್ಲಿ ರಾಮ ಜಪ ಮಾಡುತ್ತ ಬಗಲಲ್ಲಿ ಚೂರಿ ಇಟ್ಟು-ಕೊಂಡು ದ್ರೋಹ ಬಗೆಯುತ್ತಿದ್ದಾರೆ’ ಎಂದು ಬಿಜೆಪಿ ಪಕ್ಷದ ವಿರುದ್ಧ ಹರಿಹಾಯಲಾಗಿದೆ.
ಮಾಜಿ ಮೇಯರ್ ಎಂಎನ್ಎಸ್ ಅಭ್ಯರ್ಥಿ: ಶಿವಸೇನೆ ಪ್ರಮುಖ ನಾಯಕಿ ಮತ್ತು ಮಾಜಿ ಮೇಯರ್ ಶುಭಾ ರಾವಲ್ ಎಂಎನ್ಎಸ್ ಅಭ್ಯರ್ಥಿಯಾಗಿ ಈ ಬಾರಿ ದಹಿಸಾರಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದರಿಂದ ಶಿವಸೇನೆಗೆ ಆಘಾತವಾಗಿದೆ.