ಮೈಸೂರು: ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯಗಳನ್ನು ತಡೆಗಟ್ಟಬೇಕು. ಮಹಿಳೆಯರನ್ನು ಪ್ರತಿಯೊಬ್ಬರೂ ಗೌರವದಿಂದ ಕಾಣಬೇಕು ಎಂಬ ಸಂದೇಶಗಳು ಬಾನಂಗಳದಲ್ಲಿ ತೇಲಾಡಿದವು. ಮಕ್ಕಳು ಬೃಹತ್ ಗಾಳಿಪಟಗಳನ್ನು ನೋಡಿ ಖುಷಿಪಟ್ಟು ಕುಣಿದು ಖುಷಿಪಟ್ಟರೆ, ಗಾಳಿಪಟದ ಮೇಲೆ ಬರೆದಿದ್ದ ಘೋಷವಾಕ್ಯಗಳು ಹಿರಿಯರನ್ನು ಚಿಂತೆಗೆ ಹಚ್ಚಿದವು.
–ನಾಡಹಬ್ಬ ದಸರಾ ಮಹೋತ್ಸವದ ಪ್ರಯುಕ್ತ ದಸರಾ ಪ್ರಚಾರ ಉಪಸಮಿತಿ ನಗರದ ಲಲಿತಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗಾಳಿಪಟ ಉತ್ಸವದಲ್ಲಿ ಕಂಡು ಬಂದ ದೃಶ್ಯಗಳಿವು.
ಗುಜರಾತಿನ ಪವನ್ ಸೋಲಂಕಿ ತಯಾರಿಸಿದ್ದ ಸುಮಾರು ೫೦ ಅಡಿ ಉದ್ದದ ಗಾಳಿಪಟದಲ್ಲಿ ‘ಮಹಿಳೆಯರನ್ನು ಆದರಿಸಿ’, ‘ನಾರಿಯನ್ನು ಪೂಜಿಸಿ’ ಎಂಬ ಸಂದೇಶಗಳನ್ನು ಹಾಕಲಾಗಿತ್ತು. ಬೃಹತ್ ಗಾಳಿಪಟವನ್ನು ಹಾರಿಸಲು ಸುಮಾರು ೨೦ಕ್ಕೂ ಹೆಚ್ಚು ಮಂದಿ ಶ್ರಮಪಟ್ಟರು. ಕೊನೆಗೂ ಮೇಲೇರಿದ ಗಾಳಿಪಟ ಕೆಲ ಹೊತ್ತು ಬಾನಂಗಳದಲ್ಲಿ ಹಾರಾಡಿ, ಗಾಳಿ ಕಡಿಮೆ ಆಗುತ್ತಿದ್ದಂತೆ ಗೋತಾ ಹೊಡೆಯುತ್ತಾ ನೆಲಕಚ್ಚಿತು. ಇದರಿಂದ ನೆರೆದಿದ್ದವರಿಗೆ ನಿರಾಶೆಯಾಯಿತು. ಮತ್ತೆ ಅದೇ ಪಟವನ್ನು ಮೇಲೇರಿಸುವ ಪ್ರಯತ್ನ ನಡೆಯಿತು.
ರಾಷ್ಟ್ರೀಯ–ಅಂತರರಾಷ್ಟ್ರೀಯ ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಬಾಚಿ ತಮ್ಮದೇ ಶಿಷ್ಯವೃಂದವನ್ನು ಹೊಂದಿರುವ ಬೆಂಗಳೂರಿನ ಆರ್.ಟಿ. ನಗರದ ವಿ.ಕೆ. ರಾವ್ ತಯಾರಿಸಿದ ‘ಸಾಕು ನಿನ್ನ ಕ್ರೌರ್ಯ’ ಮತ್ತು ‘ಜನನಿಗೆ ನಮನ’ ಸಂದೇಶ ಮತ್ತು ಮಹಿಳೆಯರ ಚಿತ್ರಗಳಿದ್ದ ಗಾಳಿಪಟಗಳು ನೀಲಾಕಾಶದಲ್ಲಿ ತೇಲಾಡಿದವು.
ಗಾಳಿಪಟವನ್ನು ಮುಗಿಲಿಗೆ ಹಾರಿಬಿಡುವ ಮೂಲಕ ನೆರೆದಿದ್ದವರಿಗೆ ಮನರಂಜನೆ ನೀಡುವ ಜತೆಗೆ ಮಹಿಳೆಯರ ರಕ್ಷಣೆ ಕುರಿತಾದ ಸಂದೇಶಗಳನ್ನು ರವಾನಿಸುವ ಪ್ರಯತ್ನ ಯಶಸ್ವಿಯಾಯಿತು. ಗಾಳಿಪಟ ಉತ್ಸವದ ಆರಂಭದ ದಿನ ಡ್ರ್ಯಾಗನ್ ಗಾಳಿಪಟವನ್ನು ಬಿಟ್ಟು ಬೆರಗಾಗುವಂತೆ ಮಾಡಿದ್ದ ರಾವ್ ಅವರು ಎರಡನೇ ದಿನಕ್ಕೆ ಭಿನ್ನವಾದ ಗಾಳಿಪಟವನ್ನು ಹಾರಿಬಿಟ್ಟಿದ್ದರು. ಒಂದೇ ದಾರದಲ್ಲಿ ಮುತ್ತುಗಳಂತೆ ಪೋಣಿಸಿದ್ದ ೫೦೦ ಗಾಳಿಪಟಗಳು ಆಕಾಶದಲ್ಲಿ ಅಲೆ ಅಲೆಯಾಗಿ ತೇಲಿದ್ದನ್ನು ನೆರೆದಿದ್ದವರು ಕಣ್ತುಂಬಿಕೊಂಡರು.
ಮಹಾರಾಷ್ಟ್ರದ ಅಶೋಕ್ ಡಿಸೈನಿಂಗ್ ಕೈಟ್ಸ್ ಸಂಸ್ಥೆಯ ಮಾಲೀಕ ಅಶೋಕ್ ಚೋಟಾ ಭೀಮ್ (ಏರ್ ಬಲೂನ್ ಮಾದರಿ)ನನ್ನು ಬಾನಂಗಳಕ್ಕೆ ಬಿಟ್ಟು ಎಲ್ಲರನ್ನು ಚಕಿತಗೊಳಿಸಿದರು. ಆಗಸದಲ್ಲಿ ಭುವಿಗೆ ಮುಖ ಮಾಡಿಕೊಂಡು ಎತ್ತರಕ್ಕೆ ಹೋಗುತ್ತಿದ್ದ ಚೋಟಾ ಭೀಮ್ನನ್ನು ಕಂಡ ಮಕ್ಕಳ ಸಂತಸಕ್ಕೆ ಪಾರವೇ ಇರಲಿಲ್ಲ. ಮಕ್ಕಳ ಗುಂಪಿನಿಂದ ‘ಚೋಟಾ ಭೀಮ್ ...’ ಎಂಬ ಕೂಗು ಮುಗಿಲು ಮುಟ್ಟಿತು.
ಬೇಸ್ತು ಬೀಳಿಸಿದ ಗಾಳಿಪಟ: ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿದ್ದ ಹದ್ದನ್ನು ಕಂಡು ಕೆಲವರು ಅವಕ್ಕಾದರು. ಗಾಳಿಗೆ ಅತ್ತಿತ್ತ ಅಲುಗಾಡುತ್ತಿದ್ದುದು ಬಿಟ್ಟರೆ, ಹದ್ದು ಸುತ್ತು ಹಾಕದಿರುವುದನ್ನು ಕಂಡು ನೆರೆದಿದ್ದವರಲ್ಲಿ ಸಂಶಯ ಮೂಡಿತು. ಅಶೋಕ್ ದಾರದಿಂದ ಹದ್ದನ್ನು ನಿಯಂತ್ರಿಸುತ್ತಿದ್ದುದ್ದನ್ನು ಕಂಡ ಸಾರ್ವಜನಿಕರು ಅದು ನಿಜವಾದ ಹದ್ದಲ್ಲ, ಗಾಳಿಪಟ ಎಂದು ತಿಳಿದಾಗ ಬೇಸ್ತು ಬಿದ್ದರು.
ದುರ್ಗಾ ಮಾತೆ, ಹಾವಿನಾಕಾರದ ಗಾಳಿಪಟ ಆಗಸದಲ್ಲಿ ಹಾರಾಡಿ ಎಲ್ಲರಿಗೂ ಮುದ ನೀಡಿದವು. ಗಾಳಿಪಟ ಉತ್ಸವದಲ್ಲಿ ನಡೆದ ಕಾರ್ಯಾಗಾರದಲ್ಲಿ ಸ್ವತಃ ಗಾಳಿಪಟ ತಯಾರಿಸುವುದನ್ನು ಕಲಿತು, ಆಕಾಶಕ್ಕೆ ಹಾರಿಬಿಟ್ಟು ಖುಷಿಪಡುತ್ತಿದ್ದ ಮಕ್ಕಳ ಜತೆಗೆ ಪೋಷಕರು, ಹಿರಿಯರು ಭಾಗಿಯಾಗಿ ಅವರೂ ಮಕ್ಕಳಾದರು! ಗಾಳಿಪಟ ಉತ್ಸವದ ಮೊದಲ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್ ಭಾವಚಿತ್ರದ ದೊಡ್ಡ ಗಾಳಿಪಟಗಳು ಬಾನೆತ್ತರಕ್ಕೆ ಹಾರಿ ನೋಡುಗರ ಗಮನ ಸೆಳೆದಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.