ಬೆಂಗಳೂರು: ಮದುವೆಯ ಆಮಂತ್ರಣ ಪತ್ರಿಕೆ ಕೊಡುವ ಸೋಗಿನಲ್ಲಿ ಮನೆಗೆ ಬಂದ ದುಷ್ಕರ್ಮಿಗಳು ಒಂದೂವರೆ ವರ್ಷದ ಮಗುವನ್ನು ಕೊಲ್ಲುವುದಾಗಿ ಬೆದರಿಸಿ ಹಣ ಹಾಗೂ ಚಿನ್ನಾಭರಣ ದೋಚಿರುವ ಘಟನೆ ಮಹದೇವಪುರ ಬಳಿಯ ಉದಯನಗರದಲ್ಲಿ ಮಂಗಳವಾರ ಹಾಡಹಗಲೇ ನಡೆದಿದೆ.
ಉದಯನಗರ ನಾಲ್ಕನೇ ಅಡ್ಡರಸ್ತೆ ನಿವಾಸಿ ಶಿವಕುಮಾರ್ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದ್ದು, ದುಷ್ಕರ್ಮಿಗಳು ₨ 8 ಸಾವಿರ ಮತ್ತು 68 ಗ್ರಾಂ ಚಿನ್ನಾಭರಣ ದೋಚಿದ್ದಾರೆ.
ಹವಾನಿಯಂತ್ರಣ ಉಪಕರಣಗಳ ಅಳವಡಿಕೆಯ ಕೆಲಸ ಮಾಡುವ ಶಿವಕುಮಾರ್, ಬೆಳಿಗ್ಗೆ 10 ಗಂಟೆ ಸುಮಾರಿಗೆ ಇಂದಿರಾನಗರಕ್ಕೆ ಹೋಗಿದ್ದರು. ಈ ವೇಳೆ ಅವರ ಪತ್ನಿ ಸುಲೋಚನಾ, ಒಂದೂವರೆ ವರ್ಷದ ಮಗು ಮತ್ತು ಐದು ವರ್ಷದ ಮಗ ಮಾತ್ರ ಮನೆಯಲ್ಲಿದ್ದರು.
ಈ ಸಂದರ್ಭದಲ್ಲಿ ಶಿವಕುಮಾರ್ ಅವರ ಸ್ನೇಹಿತರೆಂದು ಹೇಳಿಕೊಂಡು ಮದುವೆಯ ಆಮಂತ್ರಣ ಪತ್ರಿಕೆ ಕೊಡುವ ನೆಪದಲ್ಲಿ ಅಪರಿಚಿತ ವ್ಯಕ್ತಿಗಳಿಬ್ಬರು ಮನೆಗೆ ಬಂದಿದ್ದಾರೆ. ಸುಲೋಚನಾ ಅವರು ಆ ಇಬ್ಬರನ್ನು ನಡುಮನೆಯಲ್ಲಿ ಕೂರಿಸಿ, ಕುಡಿಯುವ ನೀರು ತಂದು ಕೊಡಲು ಅಡುಗೆ ಕೋಣೆಗೆ ಹೋಗಿದ್ದರು. ಆಗ ಆರೋಪಿಗಳು ಸಮೀಪದಲ್ಲೇ ಆಟವಾಡುತ್ತಿದ್ದ ಮಗುವಿನ ಕತ್ತಿಗೆ ಚಾಕು ಹಿಡಿದು, ಸುಲೋಚನಾ ಅವರು ಅಡುಗೆ ಕೋಣೆಯಿಂದ ಹೊರ ಬರುತ್ತಿದ್ದಂತೆ ಚಿನ್ನಾಭರಣ ಕೊಡುವಂತೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದರಿಂದ ಗಾಬರಿಯಾದ ಸುಲೋಚನಾ ಅವರು ಸರ, ಎರಡು ಉಂಗುರ ಮತ್ತು ಅಲ್ಮೇರಾದಲ್ಲಿದ್ದ ಹಣವನ್ನು ಕೊಟ್ಟಿದ್ದಾರೆ. ನಂತರ ಆರೋಪಿಗಳು ಅವರನ್ನು ಮನೆಯೊಳಗೆ ಕೂಡಿ ಹಾಕಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ನೇಹಿತನ ಕೃತ್ಯ
ಶಿವಕುಮಾರ್ ಅವರ ಸ್ನೇಹಿತ ಪ್ರಭಾಕರ್ ಎಂಬಾತ ತನ್ನ ಸಹಚರರ ಜತೆ ಸೇರಿ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ತನಿಖೆಯಿಂದ ಗೊತ್ತಾಗಿದೆ. ಪ್ರಭಾಕರ್ ಸೇರಿ ದಂತೆ ಮೂವರನ್ನು ವಶಕ್ಕೆ ತೆಗೆದು ಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಸ್ನೇಹಿತನ ಕೃತ್ಯ