ಬೆಂಗಳೂರು: ಬ್ಯಾಂಕ್ನಿಂದ ₨ 4.5 ಲಕ್ಷ ಡ್ರಾ ಮಾಡಿಕೊಂಡು ತೆರಳುತ್ತಿದ್ದ ಮಹಿಳೆಯನ್ನು ಬೈಕ್ನಲ್ಲಿ ಹಿಂಬಾಲಿಸಿದ ದುಷ್ಕರ್ಮಿಗಳು, ಹಣದ ಬ್ಯಾಗ್ ದೋಚಿ ಪರಾರಿಯಾಗಿರುವ ಘಟನೆ ಜಯನಗರ ಒಂಬತ್ತನೇ ಬ್ಲಾಕ್ನಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಈ ಸಂಬಂಧ ತಿಲಕ್ನಗರ ನಿವಾಸಿ ಅಣ್ಣಮ್ಮ (45) ಎಂಬುವರು ದೂರು ಕೊಟ್ಟಿದ್ದಾರೆ. ಬಾಡಿಗೆ ಮನೆಗೆ ಮುಂಗಡ ಕೊಡುವ ಉದ್ದೇಶದಿಂದ ಅವರು ಹಣ ಡ್ರಾ ಮಾಡಲು ಮಧ್ಯಾಹ್ನ 12 ಗಂಟೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜಯನಗರ ಶಾಖೆಗೆ ಬಂದಿದ್ದರು. ಹಣ ಡ್ರಾ ಮಾಡಿಕೊಂಡು ಸಮೀಪದ ಬಸ್ ನಿಲ್ದಾಣಕ್ಕೆ ನಡೆದು ಹೋಗುತ್ತಿದ್ದಾಗ ಇಬ್ಬರು ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ.
ಕಳ್ಳರು ಬ್ಯಾಗ್ ಕಸಿದುಕೊಳ್ಳುತ್ತಿದ್ದಂತೆ ಅಣ್ಣಮ್ಮ ನೆರವಿಗಾಗಿ ಕೂಗಿಕೊಂಡಿದ್ದಾರೆ. ಸ್ಥಳೀಯರು ಬರುವಷ್ಟರಲ್ಲಿ ಆರೋಪಿಗಳು ಕಣ್ಮರೆಯಾಗಿದ್ದಾರೆ. ಸಮೀಪದ ಕಟ್ಟಡವೊಂದರಲ್ಲಿನ ಸಿ.ಸಿ. ಟಿ.ವಿ ಕ್ಯಾಮೆರಾದಲ್ಲಿ ಆರೋಪಿಗಳ ಚಲನವಲನಗಳು ದಾಖಲಾಗಿವೆ ಎಂದು ತಿಲಕ್ನಗರ ಪೊಲೀಸರು ಹೇಳಿದ್ದಾರೆ.