ಹೈದರಾಬಾದ್ (ಪಿಟಿಐ): ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಭಾಗಿಯಾಗಿರುವ ಓಬಳಾಪುರಂ ಗಣಿ (ಒಎಂಸಿ) ಹಗರಣದಲ್ಲಿ ಆಂಧ್ರದ ಮಾಜಿ ಗೃಹ ಸಚಿವೆ ಸಬಿತಾ ಇಂದ್ರಾ ರೆಡ್ಡಿ ಹಾಗೂ ನಿವೃತ್ತ ಐಎಎಸ್್ ಅಧಿಕಾರಿ, ಮಾಜಿ ಗಣಿ ಕಾರ್ಯದರ್ಶಿ ಬಿ.ಕೃಪಾನಂದಂ ವಿರುದ್ಧ ಸಿಬಿಐ ಬುಧವಾರ ಹೆಚ್ಚುವರಿ ದೋಷಾರೋಪ ಸಲ್ಲಿಸಿದೆ.
ಕೃಪಾನಂದಂ ಅವರನ್ನು ಎಂಟನೇ ಮತ್ತು ಸಬಿತಾ ಅವರನ್ನು ಒಂಬತ್ತನೇ ಆರೋಪಿಯನ್ನಾಗಿ ಹೆಸರಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಇವರಿಬ್ಬರ ವಿರುದ್ಧ ಅಪರಾಧ ಸಂಚು, ನಂಬಿಕೆ ದ್ರೋಹ ಆರೋಪ ಹೊರಿಸಲಾಗಿದೆ.
‘ಇವರಿಬ್ಬರು, ಗಣಿ ಗುತ್ತಿಗೆ ಪಡೆಯಲು ಬಂದಿದ್ದ ಇತರ ಅರ್ಜಿಗಳನ್ನು ತಿರಸ್ಕರಿಸಿ ಒಎಂಸಿ ಪ್ರಸ್ತಾವಕ್ಕೆ ಆದ್ಯತೆ ನೀಡಿದ್ದರು’ ಎಂದು ಕೋರ್ಟ್ಗೆ ಸಿಬಿಐ ತಿಳಿಸಿದೆ.
‘ಈ ಹೆಚ್ಚುವರಿ ದೋಷಾರೋಪಗಳನ್ನು ಅಂತಿಮ ವರದಿಯನ್ನಾಗಿ ಪರಿಗಣಿಸಬಹುದು’ ಎಂದೂ ಸಿಬಿಐ ಹೇಳಿದೆ.
ಹೆಚ್ಚುವರಿ ದೋಷಾರೋಪದಲ್ಲಿ 104 ದಾಖಲೆಗಳು ಹಾಗೂ 36 ಸಾಕ್ಷಿಗಳ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ.
‘ಇದರಲ್ಲಿ ಸಬಿತಾ ಹಾಗೂ ಕೃಪಾನಂದಂ ಪಾತ್ರ ರುಜುವಾತಾಗಿದೆ. ಹಾಗಾಗಿ ಅವರ ವಿರುದ್ಧ ಹೆಚ್ಚುವರಿ ದೋಷಾರೋಪ ಸಲ್ಲಿಸಲಾಗಿದೆ’ ಎಂದು ಸಿಬಿಐ ವಕೀಲರು ಕೋರ್ಟ್ಗೆ ತಿಳಿಸಿದರು.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಟಿಕೆಟ್್ ವಂಚಿತರಾಗಿರುವ ಸಬಿತಾ ಅವರಿಗೆ ಈ ಬೆಳವಣಿಗೆಯಿಂದ ಮತ್ತಷ್ಟು ಹಿನ್ನಡೆಯಾಗಿದೆ.
‘ಸಬಿತಾ ಅವರನ್ನು ಶೀಘ್ರವೇ ಬಂಧಿಸುವ ಸಾಧ್ಯತೆ ಇದೆ’ ಎಂದು ಸಿಬಿಐ ಮೂಲಗಳು ಹೇಳಿವೆ. ಹಾಗೇನಾದರೂ ಆದಲ್ಲಿ ಟಿಡಿಪಿ, ಟಿಆರ್ಎಸ್್ ಹಾಗೂ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಇದೊಂದು ಅಸ್ತ್ರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
₨5000 ಕೋಟಿ ಹಗರಣದಲ್ಲಿ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಈಗಾಗಲೇ ಜೈಲಿನಲ್ಲಿದ್ದಾರೆ. ಕಡಪಾ ಸಂಸದ, ವೈಎಸ್ಆರ್ಸಿ ಅಧ್ಯಕ್ಷ ವೈ.ಎಸ್.ಜಗನ್ ಮೋಹನ್್ ರೆಡ್ಡಿ ಭಾಗಿಯಾಗಿರುವ ಗಣಿ ಹಗರಣಕ್ಕೆ ಸಂಬಂಧಿಸಿದ ಆರೋಪಪಟ್ಟಿಯಲ್ಲಿ ಈಗಾಗಲೇ ಸಬಿತಾ ಅವರನ್ನು ಸಾಕ್ಷಿಯನ್ನಾಗಿ ಮಾಡಲಾಗಿತ್ತು.