ಇಸ್ಲಾಮಾಬಾದ್ (ಪಿಟಿಐ): ‘ಭಾರತವು ಮಾತುಕತೆಗೆ ಸಿದ್ಧವಾಗುವವರೆಗೂ ಕಾಯುತ್ತೇವೆ. ಈ ವಿಷಯದಲ್ಲಿ ನಾವು ಆತುರಪಡುವುದಿಲ್ಲ’ ಎಂದು ಪಾಕಿಸ್ತಾನ ಹೇಳಿದೆ.
ಉಭಯ ರಾಷ್ಟ್ರಗಳ ನಡುವಣ ಮಾತುಕತೆಗೆ ಭಾರತದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರುವವರೆಗೂ ಸುಮ್ಮನಿರಲು ಪಾಕಿಸ್ತಾನ ನಿರ್ಧರಿಸಿದೆ ಎಂದು ಮಾಧ್ಯಮ ವರದಿ ಮಾಡಿದೆ.
ಭಾರತದಲ್ಲಿರುವ ಪಾಕಿಸ್ತಾನದ ರಾಯಭಾರಿ ಅಬ್ದುಲ್ ಬಸಿತ್ ಅವರೊಂದಿಗೆ ಪ್ರಧಾನಿ ನವಾಜ್ ಷರೀಫ್ ಅವರು ಬುಧವಾರ ಮಾತುಕತೆ ನಡೆಸಿದ್ದು, ಆ ಸಂದರ್ಭದಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಲಾಯಿತು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
‘ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಭಾರತ ಮಾತುಕತೆಗೆ ಸಿದ್ಧವಾಗುವವರೆಗೂ ನಾವು ಕಾಯುತ್ತೇವೆ’ ಎಂದು ಪಾಕಿಸ್ತಾನ ತಿಳಿಸಿರುವುದಾಗಿ ಪತ್ರಿಕೆ ಉಲ್ಲೇಖಿಸಿದೆ.
ಭಾರತ ಪ್ರಮುಖವಾದ ನೆರೆ ರಾಷ್ಟ್ರವಾಗಿದ್ದು, ಆ ದೇಶದೊಂದಿಗೆ ಸಹಜವಾದ ಸಂಬಂಧವನ್ನು ಹೊಂದಲು ಪಾಕಿಸ್ತಾನ ಬಯಸುತ್ತದೆ. ಪರಮಾಧಿಕಾರ, ಸಮಾನತೆ ವಿಷಯದಲ್ಲಿ ಉಭಯ ರಾಷ್ಟ್ರಗಳು ಪರಸ್ಪರ ಗೌರವಿಸಬೇಕು ಎಂದು ಷರೀಫ್ ಅವರು ಬಸಿತ್ ಅವರಿಗೆ ಸ್ಪಷ್ಟಪಡಿಸಿದ್ದಾರೆ.
ಬಸಿತ್ ಅವರು ಕಳೆದ ಆಗಸ್ಟ್ನಲ್ಲಿ ಕಾಶ್ಮೀರದ ಪ್ರತ್ಯೇಕತಾವಾದಿಗಳೊಂದಿಗೆ ಮಾತುಕತೆ ನಡೆಸಿದ ಪರಿಣಾಮ, ಉಭಯ ರಾಷ್ಟ್ರಗಳ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ಮುರಿದಿಬಿದ್ದಿತ್ತು.