ಕೊಳ್ಳೇಗಾಲ: ‘ಪ್ರಸ್ತುತ ಯುವ ಜನರು, ವಿದ್ಯಾರ್ಥಿ ಸಮುದಾಯ ಕಾನೂನು ಬಾಹಿರ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿರುವುದು ಆತಂಕ ಕಾರಿಯಾಗಿದೆ’ ಎಂದು ಮುಡಿಗುಂಡ ಜೆ.ಎಸ್.ಎಸ್. ಪ್ರೌಢಶಾಲೆ ಮುಖ್ಯ ಶಿಕ್ಷಕ ಪುಟ್ಟಸ್ವಾಮಿ ಹೇಳಿದರು. ಪಟ್ಟಣದ ಮುಡಿಗುಂಡ ಜೆ.ಎಸ್.ಎಸ್. ಪ್ರೌಢಶಾಲೆಯಲ್ಲಿ ಬುಧವಾರ ನಡೆದ ಮೂಲಭೂತ ಕರ್ತವ್ಯಗಳು ಹಾಗೂ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹದಿಹರೆಯದ ಮಕ್ಕಳಿಗೆ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವನ್ನು ನೀಡಿ ಅವರನ್ನು ದೇಶದ ಉತ್ತಮ ಪ್ರಜೆಯನ್ನಾಗಿ ರೂಪಿಸಬೇಕು. ಚಿಕ್ಕಂದಿನಲ್ಲೇ ಗುರು–ಹಿರಿಯರು ಮಾರ್ಗದರ್ಶನ ನೀಡಬೇಕಿದ ಎಂದ ಅವರು ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಹಾಗೂ ಸಮಯಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದರು.
ಸರ್ಕಾರಿ ವಕೀಲ ನಾಗೇಶ್ ಮೂಲಭೂತ ಕರ್ತವ್ಯಗಳ ಕುರಿತು ಮಾತನಾಡಿ ಅನ್ಯಾಯಕ್ಕೊಳಗಾದಾಗ ನ್ಯಾಯ ದೊರಕಿಸಿಕೊಳ್ಳುವ ಸಮಾನ ಅವಕಾಶದ ಭರವಸೆಯನ್ನು ಸಂವಿಧಾನವು ದೇಶದ ಎಲ್ಲಾ ಜನತೆಗೂ ನೀಡಿದೆ. ಆದರೆ ಇದೇ ಸಂವಿಧಾನದಲ್ಲಿ ಎಲ್ಲಾ ಜನತೆ ಅನುಸರಿಸು ಸೂಚಿಸಿರುವ ಮೂಲಭೂತ ಕರ್ತವ್ಯಗಳ ಬಗ್ಗೆ ಜನತೆ ಮುಂದಾಗುತ್ತಿಲ್ಲ ಎಂದರು.
ದೇಶದ ಅಭಿವೃದ್ಧಿ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಪ್ರಜೆಯೂ ಮೂಲಭೂತ ಕರ್ತವ್ಯಗಳನ್ನು ಪಾಲಿಸಬೇಕಾದ ಗುರುತರ ಜವಾಬ್ದಾರಿ ಇದ್ದು ಈ ಬಗ್ಗೆ ಯುವಕರು ವಿದ್ಯಾರ್ಥಿ ದಿಸೆಯಲ್ಲೇ ಮೂಲಭೂತ ಕರ್ತವ್ಯಗಳ ಪಾಲನೆಗೆ ಮುಂದಾಗಬೇಕು ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಸವಾ ವಲಯ ಮೇಲ್ವಿಚಾರಕ ಧರ್ನಪ್ಪಗೌಡ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಪ್ರತಿಜ್ಞಾವಿಧಿ ಬೋದಿಸಿ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು ಮತ್ತು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಮಹತ್ವ ಕುರಿತು ಉಪನ್ಯಾಸ ನೀಡಿದರು.
ಮುಡಿಗುಂಡ ಸೇವಾ ಪ್ರತಿನಿದಿ ಹನುಮಂತ, ಮುಡಿಗುಂಡ ಒಕ್ಕೂಟ ಉಪಾಧ್ಯಕ್ಷೆ ನಾಗರತ್ನ, ಕಾರ್ಯದರ್ಶಿ ಪ್ರೇಮಾಕುಮಾರಿ, ಸಹ ಶಿಕ್ಷಕ ಸಿದ್ದಲಿಂಗ ಆರಾಧ್ಯ, ಶಿಕ್ಷಕಿ ಪಿ. ವಿಮಲಾ ಇತರರು ಇದ್ದರು.