ನವದೆಹಲಿ (ಪಿಟಿಐ): ವೀಸಾ ವಂಚನೆ ಪ್ರಕರಣದಲ್ಲಿ ಅಮೆರಿಕದಲ್ಲಿ ಕಳೆದ ವರ್ಷ ಬಂಧಿತರಾಗಿದ್ದ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರು ಇದೀಗ ಕೇಂದ್ರ ಸರ್ಕಾರದಿಂದ ಕಠಿಣ ಕ್ರಮಕ್ಕೆ ಗುರಿಯಾಗಿದ್ದಾರೆ.
ದೇವಯಾನಿ ಅವರ ಮೇಲೆ ಅಧಿಕೃತವಾಗಿ ಅನುಮತಿ ಪಡೆಯದೆ ಮಾಧ್ಯಮಗಳೊಂದಿಗೆ ಮಾತನಾಡಿದ ದೂರನ್ನು ಹೊರಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಕ್ರಮ ತೆಗೆದುಕೊಂಡಿದೆ. ಶಿಸ್ತು ಕ್ರಮ ಮತ್ತು ಆಡಳಿತಾತ್ಮಕ ಕ್ರಮಕ್ಕೆ ಮುಂದಾಗಿ ತನಿಖೆಗೆ ಚಾಲನೆ ನೀಡಿರುವ ಸಚಿವಾಲಯವು ಖೋಬ್ರಾಗಡೆ ಅವರಿಗೆ ಯಾವುದೇ ಹುದ್ದೆ ತೋರದೆ ‘ಕಡ್ಡಾಯ ಕಾಯುವಿಕೆ’ ಪಟ್ಟಿಯಲ್ಲಿ ಇರಿಸಿದೆ.
ಅಮೆರಿಕದಿಂದ ಜನವರಿಯಲ್ಲಿ ವಾಪಸ್ ಬಂದ ಮೇಲೆ ಅವರು ಸಚಿವಾಲಯದ ಅಭಿವೃದ್ಧಿ ಸಹಭಾಗಿತ್ವ ವಿಭಾ-ಗದಲ್ಲಿ ನಿರ್ದೇಶಕ ಶ್ರೇಣಿಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು.
ತಾನು ಯಾವುದೇ ತಪ್ಪು ಎಸಗಿಲ್ಲ ಎಂದು ದೇವಯಾನಿ ಸಮರ್ಥಿಸಿಕೊಂಡಿದ್ದಾರೆ. ತಮ್ಮ ಮಕ್ಕಳಿಗೆ ಎರಡು ಪಾಸ್ಪೋರ್ಟ್ ಕೊಡಿಸಿದ್ದಾಗಲೀ ಅಥವಾ ಮಾಧ್ಯಮಗಳ ಜತೆ ಮಾತನಾಡಿದ್ದಾಗಲೀ ತಪ್ಪು ಅಲ್ಲ ಎಂದು ಹೇಳಿದ್ದಾರೆ. ಮಾಧ್ಯಮಗಳ ಮುಂದೆ ವೈಯಕ್ತಿಯ ಅಭಿಪ್ರಾಯ ಹಂಚಿಕೊಳ್ಳುವುದಕ್ಕೆ ಸೇವಾ ನಿಯಮಗಳಲ್ಲೇ ಅವಕಾಶವಿದೆ ಎಂದು ತಿಳಿಸಿದ್ದಾರೆ.
ದೇವಯಾನಿ ಅವರ ತಂದೆ ಮತ್ತು ಮಾಜಿ ಐಎಎಸ್ ಅಧಿಕಾರಿ ಉತ್ತಮ್ ಖೋಬ್ರಾಗಡೆ ಅವರು ಕೂಡ ತಮ್ಮ ಮಗಳನ್ನು ಸಮರ್ಥಿಸಿಕೊಂಡಿದ್ದಾರೆ.