ಬೆಂಗಳೂರು: ‘ಇತ್ತೀಚಿನ ವರ್ಷಗಳಲ್ಲಿ ಮಾನವ–ಪ್ರಾಣಿ ಸಂಘರ್ಷದ ಪ್ರಕರಣಗಳು ಹೆಚ್ಚುತ್ತಿವೆ’ ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ಕಳವಳ ವ್ಯಕ್ತಪಡಿಸಿದರು.
‘ಇಂಡಿಯನ್ ವೈಲ್ಡ್ಲೈಫ್ ಕನ್ಸರ್ವೇಷನ್ ಟ್ರಸ್ಟ್’ ಆಶ್ರಯದಲ್ಲಿ ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಗುರುವಾರ ಆಯೋಜಿಸಿದ್ದ ವನ್ಯಜೀವಿ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
‘ಜನಸಂಖ್ಯಾ ಹೆಚ್ಚಳದಿಂದಾಗಿ ಅರಣ್ಯವನ್ನು ಕಡಿದು ಮನೆ ನಿರ್ಮಾಣ, ಕೃಷಿಗೆ ಬಳಸಲಾಗುತ್ತಿದೆ. ವನ್ಯಜೀವಿ ಕಾರಿಡಾರ್ಗಳು ನಾಶವಾಗುತ್ತಿವೆ. ಇದರಿಂದಾಗಿ ವನ್ಯಜೀವಿಗಳು ನಾಡಿಗೆ ನುಗ್ಗುತ್ತಿವೆ. ಇದರಿಂದಾಗಿ ಸಂಘರ್ಷ ಉಂಟಾಗುತ್ತಿದೆ. ಮಾನವ–ಪ್ರಾಣಿ ಸಂಘರ್ಷ ತಡೆಗಟ್ಟಲು ಅರಣ್ಯ ಇಲಾಖೆ ಯೋಜನೆ ರೂಪಿಸಿ ಕ್ರಮ ಕೈಗೊಳ್ಳುತ್ತಿದೆ’ ಎಂದು ಅವರು ಹೇಳಿದರು.
ರಾಜ್ಯದಲ್ಲಿ 410 ಹುಲಿಗಳಿವೆ. ಅತಿ ಹೆಚ್ಚು ಹುಲಿಗಳು ರಾಜ್ಯದಲ್ಲೇ ಇವೆ. 6,000ಕ್ಕೂ ಅಧಿಕ ಆನೆಗಳಿವೆ ಎಂದ ಸಚಿವರು, ಅರಣ್ಯ ಸಂರಕ್ಷಿಸಲು ಪ್ರತಿಯೊ ಬ್ಬರೂ ಒಂದು ಗಿಡ ನೆಡಬೇಕು ಎಂದು ಸಲಹೆ ನೀಡಿದರು.
ಪ್ರದರ್ಶನದಲ್ಲಿ ಇಂಡಿಯನ್ ವೈಲ್ಡ್ಲೈಫ್ ಕನ್ಸರ್ವೇಷನ್ ಟ್ರಸ್ಟ್ನ ಆರು ಮಂದಿ ಛಾಯಾಗ್ರಾಹಕರು ದೇಶ ವಿದೇಶಗಳಲ್ಲಿ ತೆಗೆದ 68 ಛಾಯಾ ಚಿತ್ರಗಳು ಇವೆ. ಮೇ 1ರ ವರೆಗೆ ಪ್ರದರ್ಶನ ಮುಂದುವರಿಯಲಿದೆ.