ಡೆಹ್ರಾಡೂನ್/ಪಿತೌರಗಡ (ಪಿಟಿಐ): ಕೈಲಾಸ ಮಾನಸ ಸರೋವರ ಯಾತ್ರೆಗೆ ನಾಥುಲಾ ಪಾಸ್ ಮೂಲಕ ಪರ್ಯಾಯ ಮಾರ್ಗ ಮುಕ್ತಗೊಳಿಸಿರುವುದಕ್ಕೆ ಉತ್ತರಾಖಂಡದ ಕುಮಾಂವ್ ಪ್ರದೇಶದಲ್ಲಿ ಭಾರಿ ಪ್ರತಿಭಟನೆ ವ್ಯಕ್ತವಾಗಿದೆ.
ಪರ್ಯಾಯ ಮಾರ್ಗದಿಂದಾಗಿ ಧಾರ್ಚುಲಾ, ಸಿಯಾಲೇಖ್ ಮೂಲಕ ಮಾನಸ ಸರೋವರಕ್ಕೆ ತೆರಳುವ ಸಾಂಪ್ರದಾಯಿಕ ಯಾತ್ರೆಯ ಮಾರ್ಗದಲ್ಲಿ ವಾಣಿಜ್ಯ ಚಟುವಟಿಕೆ ಕೈಗೊಂಡಿರುವ ಸ್ಥಳೀಯರ ಜೀವನೋಪಾಯಕ್ಕೆ ಧಕ್ಕೆಯಾಗುತ್ತದೆ ಎಂದು ಸ್ಥಳೀಯರು ದೂರಿದ್ದಾರೆ. ಕೆಲವೆಡೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಗಿದೆ.
ಯಾತ್ರೆಯ ಮಾರ್ಗ ಬದಲಿಸಿದಲ್ಲಿ, ಯಾತ್ರೆಯನ್ನು ನಿರ್ವಹಿಸುವ ಕುಮಾಂವ್ ಮಂಡಲ್ ವಿಕಾಸ್ ನಿಗಮಕ್ಕೆ (ಕೆಎಂವಿಎನ್) ₨ 3 ಕೋಟಿ ನಷ್ಟವಾಗುತ್ತದೆ. ಕೇಂದ್ರ ಸರ್ಕಾರ ಪ್ರತಿ ಯಾತ್ರಿಗೆ ಊಟೋಪಚಾರಕ್ಕಾಗಿ 32,000 ಬಿಡುಗಡೆ ಮಾಡುತ್ತದೆ. ನೂರಾರು ಕೂಲಿಯಾಳುಗಳು, ಸಣ್ಣ ಅಂಗಡಿ ಮಾಲೀಕರಿಗೆ ಭಾರಿ ನಷ್ಟವಾಗುತ್ತದೆ ಎಂದು ಕೆಎಂವಿಎನ್ನ ಡಿ.ಕೆ. ಶರ್ಮಾ ಹೇಳಿದ್ದಾರೆ.