ನವದೆಹಲಿ (ಪಿಟಿಐ): ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ, ‘2ಜಿ’ ಹಾಗೂ ಕಲ್ಲಿದ್ದಲು ಹಗರಣದ ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ದೂರು ನೀಡಿರುವ ಸರ್ಕಾರೇತರ ಸಂಸ್ಥೆಯು (ಎನ್ಜಿಒ) ಈ ಅಕ್ರಮ ಬಯಲಿಗೆಳೆದ ಸಾಮಾಜಿಕ ಕಾರ್ಯಕರ್ತರ ಹೆಸರು ಬಹಿರಂಗಪಡಿಸಲು ನಿರಾಕರಿಸಿದೆ.
ಈ ದಾಖಲೆಗಳನ್ನು ಒದಗಿಸಿರುವವರ ಹೆಸರು ಬಹಿರಂಗಪಡಿಸಿದಲ್ಲಿ ಹಲವರ ಜೀವಕ್ಕೆ ಅಪಾಯವಾಗುವ ಸಾಧ್ಯತೆಯಿದೆ ಎಂದು ಸರ್ಕಾರೇತರ ಸಂಸ್ಥೆ ‘ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್’ (ಸಿಪಿಐಎಲ್) ಹೇಳಿದೆ.
ಹೀಗೆ ಹೆಸರು ಬಹಿರಂಗಪಡಿಸುವುದರಿಂದ ವಿಶ್ವಾಸ ದ್ರೋಹ ಮಾಡಿದಂತಾಗುತ್ತದೆ. ಅಲ್ಲದೇ ಆ ವ್ಯಕ್ತಿಗಳು ದೈಹಿಕ, ಮಾನಸಿಕ ಹಿಂಸೆಗೆ ಒಳಗಾಗುವ ಸಾಧ್ಯತೆಯಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಬುಧವಾರ ಸಭೆ ಸೇರಿದ್ದ ‘ಸಿಪಿಐಎಲ್’ ಆಡಳಿತ ಮಂಡಳಿ ಸಭೆಯಲ್ಲಿ ಹೆಸರು ಬಹಿರಂಗಪಡಿಸದಿರಲು ನಿರ್ಧರಿಸಲಾಯಿತು ಎಂದು ‘ಸಿಪಿಐಎಲ್’ ಪರ ವಕೀಲ ಪ್ರಶಾಂತ್ ಭೂಷಣ್ ಸುಪ್ರೀಂಕೋರ್ಟ್ಗೆ ಗುರುವಾರ ತಿಳಿಸಿದರು.
ಬಿಹಾರದಲ್ಲಿ ರಸ್ತೆ ಹಗರಣ ಬಯಲಿಗೆಳೆದು ಕೊಲೆಗೀಡಾದ ಸತ್ಯೇಂದ್ರ ದುಬೆ ಸೇರಿದಂತೆ ಭ್ರಷ್ಟಾಚಾರ ಪ್ರಕರಣಗಳನ್ನು ಬಹಿರಂಗಪಡಿಸಿ ಹತ್ಯೆಗೆ ಒಳಗಾದ ಹಲವರ ಹೆಸರುಗಳನ್ನು ಭೂಷಣ್ ಉದಾಹರಿಸಿದರು.
ಅಕ್ರಮ ಬಯಲಿಗೆಳೆಯುವವರ ಸುರಕ್ಷತಾ ಕಾಯ್ದೆಯಲ್ಲಿಯೂ ಅಕ್ರಮಗಳ ಮಾಹಿತಿ ನೀಡುವವರ ಗುರುತು
ಬಹಿರಂಗಪಡಿಸಬಾರದು ಎಂದು ಹೇಳಲಾಗಿದೆ.