ಬೆಂಗಳೂರು: ಸರ್ಕಾರಿ ಜಮೀನಿನ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್ಟಿಐ) ಸಾರ್ವಜನಿಕರಿಗೆ ಮಾಹಿತಿ ನೀಡದ ಬೆಂಗಳೂರು ದಕ್ಷಿಣ ತಾಲ್ಲೂಕಿನ ತಹಶೀಲ್ದಾರ್ ಡಾ.ಬಿ.ಆರ್. ದಯಾನಂದ್ ಅವರಿಗೆ ರಾಜ್ಯ ಮಾಹಿತಿ ಆಯೋಗವು ಬುಧವಾರ ₨ 50 ಸಾವಿರ ದಂಡ ವಿಧಿಸಿದೆ.
ಕಲ್ಲಹಳ್ಳಿ ನಿವಾಸಿ ಕಾಳಿದಾಸ್ ರೆಡ್ಡಿ ಎಂಬ ಅರ್ಜಿದಾರರು, ಆರ್ಟಿಐ ಅಡಿ ವಸಂತಪುರ, ತುರಹಳ್ಳಿ, ಗುಬ್ಬಲಾಳ ಮತ್ತು ಸುಬ್ರಹ್ಮಣ್ಯಪುರ ಹಳ್ಳಿಗಳ ಜಮೀನಿನ ಬಗ್ಗೆ ದಯಾನಂದ್ ಅವರಿಗೆ ಮಾಹಿತಿ ಕೋರಿದ್ದರು.
‘4 ಗ್ರಾಮಗಳಲ್ಲಿ ಇರುವ ಸರ್ಕಾರಿ ಜಮೀನು, ಕೆರೆಗಳು, ರಾಜಕಾಲುವೆಗಳು, ಬಿ ಖರಾಬ್ ಜಮೀನು, ಮುಜರಾಯಿ ಇಲಾಖೆಗೆ ಸೇರಿದ ಭೂಮಿ, ಕಾಡು ಮತ್ತು ಬೆಟ್ಟ ಗುಡ್ಡಗಳ ಕುರಿತಂತೆ ಮಾಹಿತಿ ನೀಡುವಂತೆ 2013ರಲ್ಲಿ ಅರ್ಜಿ ಸಲ್ಲಿಸಿದ್ದೆ. ಆದರೆ, ತಹಶೀಲ್ದಾರ್ರಿಂದ ಈವರೆಗೂ ಯಾವುದೇ ಮಾಹಿತಿ ದೊರೆತಿಲ್ಲ’ ಎಂದು ಕಾಳಿದಾಸ್ ರೆಡ್ಡಿ ಆರೋಪಿಸಿದ್ದರು.
ರಾಜ್ಯ ಮಾಹಿತಿ ಆಯುಕ್ತರಾದ ಟಿ.ರಾಮಾನಾಯಕ್ ಅವರು ಬುಧವಾರ ತುರಹಳ್ಳಿ ಮತ್ತು ವಸಂತನಗರ ಗ್ರಾಮಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿ, ದಯಾನಂದ್ ಅವರಿಗೆ ದಂಡ ವಿಧಿಸಿದರು.