ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರದೊಂದಿಗೆ ಸಂಘರ್ಷಕ್ಕಿಳಿದಿದ್ದ ಮಿಜೋರಾಂ ರಾಜ್ಯಪಾಲ ಅಜೀಜ್ ಖುರೇಷಿ ಅವರನ್ನು ಶನಿವಾರ ಉಚ್ಛಾಟನೆಗೊಳಿಸಲಾಗಿದೆ.
ಈ ಸಂಬಂಧ ಪ್ರಕಟಣೆ ಹೊರಡಿಸಿರುವ ರಾಷ್ಟ್ರಪತಿ ಭವನ, ‘ಖುರೇಷಿ ಅವರು ಮಿಜೋರಾಂ ರಾಜ್ಯಪಾಲರ ಕಾರ್ಯಭಾರವನ್ನು ನಿಲ್ಲಿಸಬೇಕು’ ಎಂದು ಹೇಳಿದೆ.
ಪಶ್ಚಿಮ ಬಂಗಾಳ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಅವರಿಗೆ ಮಿಜೋರಾಂ ರಾಜಭವನದ ಜವಾಬ್ದಾರಿಯನ್ನು ನೋಡಿಕೊಳ್ಳಲಿದ್ದಾರೆ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನರೇಂದ್ರ ಮೋದಿ ಅವರ ನೇತೃತ್ವದ ಎನ್ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯಪಾಲರ ಉಚ್ಛಾಟನೆಯ ಎರಡನೇ ಪ್ರಕರಣವಿದು. ಕಮಲಾ ಬೇನಿವಾಲ್ ಅವರನ್ನು ಗುಜರಾತಿನಿಂದ ಮಿಜೋರಾಂಗೆ ವರ್ಗಾಯಿಸಿದ ಬಳಿಕ ಅವರನ್ನು ಉಚ್ಛಾಟಿಸಲಾಗಿತ್ತು. ಬೇನಿವಾಲ್ ವಿರುದ್ಧ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿತ್ತು.
ಖುರೇಷಿ ಅವರ ಅಧಿಕಾರಾವಧಿ 2017ರ ಮೇ ತಿಂಗಳ ವರೆಗೂ ಇತ್ತು. ಕೇಂದ್ರದಲ್ಲಿ ಯುಪಿಎ ಆಡಳಿತಾವಧಿಯಲ್ಲಿ ನೇಮಕಗೊಂಡಿದ್ದ ರಾಜ್ಯಪಾಲರನ್ನು ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅವರ ರಾಜೀನಾಮೆ ಕೇಳಿತ್ತು.
ಈ ಮೊದಲು ಆಗಿನ ಗೃಹ ಇಲಾಖೆ ಕಾರ್ಯದರ್ಶಿಯಾಗಿದ್ದ ಅನಿಲ್ ಗೋಸ್ವಾಮಿ ಅವರು ಅಧಿಕಾರ ತೊರೆಯುವಂತೆ ತಿಳಿಸಿದ್ದರು. ಆದರೆ ಸರ್ಕಾರದ ಕ್ರಮ ಪ್ರಶ್ನಿಸಿ ಖುರೇಷಿ, ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಅರ್ಜಿಯಲ್ಲಿ ಗೋಸ್ವಾಮಿ ಅವರು ಜುಲೈ 30ರಂದು ಕರೆ ಮಾಡಿ ಅಧಿಕಾರ ತೊರೆಯುವಂತೆ ತಿಳಿಸಿದ್ದರು. ಇಲ್ಲದೇ ಹೋದರೆ ಉಚ್ಛಾಟಿಸುವುದಾಗಿ ತಿಳಿಸಿದ್ದರು. ಆನಂತರ ಆಗಸ್ಟ್ 8ರಂದು ಮತ್ತೆ ಕರೆ ಮಾಡಿ ರಾಜೀನಾಮೆ ಒತ್ತಾಯಿಸಿದ್ದರು ಎಂದು ಆರೋಪಿಸಿದ್ದರು.