ನವದೆಹಲಿ: ಲೋಕಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ದೊರೆತಿದ್ದರೂ, ಮಿತ್ರ ಪಕ್ಷಗಳಿಗೆ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವ ಚಿಂತನೆಯನ್ನು ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ.
545 ಸದಸ್ಯ ಬಲದ ಲೋಕಸಭೆಗೆ 282 ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದಾರೆ. ಆದರೂ, ಮಿತ್ರ ಪಕ್ಷಗಳಾಗಿರುವ ಶಿವಸೇನೆ, ಟಿಡಿಪಿ, ಎಲ್ಜೆಪಿ, ಮತ್ತಿತರ ಪಕ್ಷಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಇಂಗಿತವನ್ನು ಮೋದಿ ವ್ಯಕ್ತಪಡಿಸಿದ್ದಾರೆ.
ಶಿವಸೇನೆ ಹದಿನೆಂಟು ಸದಸ್ಯರು ಆಯ್ಕೆಯಾಗಿದ್ದಾರೆ. ತೆಲಗುದೇಶಂ ಪಕ್ಷದ 16 ಸದಸ್ಯರು ಚುನಾಯಿತರಾಗಿದ್ದಾರೆ. ಮಿತ್ರ ಪಕ್ಷಗಳಿಗೆ ಒಂದು ಸಂಪುಟ ಮತ್ತು ಒಂದು ರಾಜ್ಯ ಸಚಿವ ಸ್ಥಾನ ನೀಡುವ ಆಲೋಚನೆ ಮೋದಿ ಅವರಿಗಿದೆ. ಆದರೆ, ಸದ್ಯದಲ್ಲೇ ನಡೆಯುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಶಿವಸೇನೆಗೆ ಒಂದು ಸಂಪುಟ ಮತ್ತು ಎರಡು ರಾಜ್ಯ ಸಚಿವ ಸ್ಥಾನ ನೀಡಲಿದ್ದಾರೆ. ಹಾಗೇ ಚಂದ್ರಬಾಬು ನಾಯ್ಡು ಅವರನ್ನು ವಿಶ್ವಾಸದಲ್ಲಿ ಇಟ್ಟುಕೊಳ್ಳಲು ಅಷ್ಟೇ ಸ್ಥಾನ ನೀಡುವ ಚಿಂತನೆ ಹೊಂದಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಬಿಜೆಪಿ ದೀರ್ಘಕಾಲದ ಮಿತ್ರ ಪಕ್ಷ ಶಿರೋಮಣಿ ಅಕಾಲಿದಳ ಸಂಪುಟದಲ್ಲಿ ಪ್ರಾತಿನಿಧ್ಯ ಬೇಡ ಎಂದು ಈಗಾಗಲೇ ಹೇಳಿದೆ. ಚಂದ್ರಬಾಬು ನಾಯ್ಡು ಭಾನುವಾರ ಮೋದಿ ಅವರನ್ನು ಕಂಡು ಚರ್ಚಿಸಲಿದ್ದಾರೆ. ಶಿವಸೇನೆ ಉದ್ಧವ್ ಠಾಕ್ರೆ ಪ್ರತ್ಯೇಕವಾಗಿ ಮಾತುಕತೆ ನಡೆಸಲಿದ್ದಾರೆ. ಎಲ್ಜೆಪಿ ಮುಖಂಡ ರಾಮ್ ವಿಲಾಸ್ ಪಾಸ್ವಾನ್ ರೈಲ್ವೆ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ, ಮಹತ್ವದ ಖಾತೆಗಳನ್ನು ಬಿಜೆಪಿ ಬಳಿಯಲ್ಲೇ ಉಳಿಸಿಕೊಳ್ಳುವ ಸುಳಿವನ್ನು ಮೋದಿ ನೀಡಿದ್ದಾರೆಂದು ಮೂಲಗಳು ಖಚಿತಪಡಿಸಿವೆ.