ನವದೆಹಲಿ (ಪಿಟಿಐ): ‘ಮುಕ್ತ ಹಾಗೂ ಜವಾಬ್ದಾರಿಯುತ ಆಡಳಿತ’ದ ಭರವಸೆ ಈಡೇರಿಸುವ ನಿಟ್ಟಿನಲ್ಲಿ ಸರ್ಕಾರಿ ಪ್ರಕ್ರಿಯೆಗಳನ್ನು ‘ಮರು ರೂಪಿಸಲು’ ಪ್ರಯತ್ನಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದ್ದಾರೆ.
ಕಳೆದ ಏಳು ತಿಂಗಳಿನಿಂದ ‘ನಾಗರಿಕರಿಗೆ ಆದ್ಯತೆ’ ಮಂತ್ರದಡಿ ತಮ್ಮ ಸರ್ಕಾರ ಕಾರ್ಯನಿರ್ವಹಿಸಿದೆ. ಶ್ರೀಸಾಮಾನ್ಯರ ಕಲ್ಯಾಣ ಬಯಸುವ ಪಾದರ್ಶಕ ಹಾಗೂ ಜವಾಬ್ದಾರಿಯುತ ಆಡಳಿತಕ್ಕೆ ಬದ್ಧವಾಗಿದೆ ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 90ನೇ ಜನ್ಮದಿನದ ಅಂಗವಾಗಿ ಆಚರಿಸಲಾಗುತ್ತಿರುವ ‘ಉತ್ತಮ ಆಡಳಿತ ದಿನ’ದ ಸಂದೇಶದಲ್ಲಿ ಮೋದಿ ಅವರು ಹೇಳಿದ್ದಾರೆ.
‘ಮುಕ್ತ ಹಾಗೂ ಜವಾಬ್ದಾರಿಯುತ ಆಡಳಿತದ ನಿಟ್ಟಿನಲ್ಲಿ ನೀಡಿದ್ದ ಭರವಸೆ ಸಾಕಾರಗೊಳಿಸುತ್ತೇವೆ. ನನ್ನ ದೇಶವಾಸಿಗಳೇ ನಾನು ನಿಮ್ಮನ್ನು ಕೈಬಿಡುವುದಿಲ್ಲ ಎಂದು ಆಶ್ವಾಸನೆ ನೀಡುವೆ’ ಎಂದು ತಿಳಿಸಿದ್ದಾರೆ.
‘ಇಂದು ನಮ್ಮ ನೆಚ್ಚಿನ ನಾಯಕರೂ ಆಗಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ. ಈ ಸಡಗರದ ಸಮಯದಲ್ಲಿ ದೇಶದ ಜನತೆಗೆ ಪಾರದರ್ಶಕ, ಪರಿಣಾಮಕಾರಿ ಹಾಗೂ ಜವಾಬ್ದಾರಿಯುತ ಆಡಳಿತ ನೀಡುವ ಬದ್ಧತೆಯನ್ನು ನಾವು ಪುನರುಚ್ಛರಿಸುತ್ತೇವೆ’ ಎಂದು ಅವರು ನುಡಿದಿದ್ದಾರೆ.