ಮುದ್ದೇಬಿಹಾಳ (ವಿಜಯಪುರ): ತಾಲ್ಲೂಕಿನ ಐದು ಐಟಿಐ ಪರೀಕ್ಷಾ ಕೇಂದ್ರಗಳ ಮೇಲೆ ಶುಕ್ರವಾರ ದಾಳಿ ನಡೆಸಿದ ವಿಜಯಪುರ ಉಪ ವಿಭಾಗಾಧಿಕಾರಿ ಪರಶುರಾಮ ಮಾದರ ನೇತೃತ್ವದ ತಂಡವು ಹಲವು ಪರೀಕ್ಷಾ ಅಕ್ರಮಗಳನ್ನು ಪತ್ತೆ ಹಚ್ಚಿದೆ.
ತಂಡವು ಮುದ್ದೇಬಿಹಾಳ ಮತ್ತು ನಾಗರಬೆಟ್ಟ ಪರೀಕ್ಷಾ ಕೇಂದ್ರಗಳ ಮೇಲೆ ದಾಳಿ ಮಾಡಿದೆ. ಪರೀಕ್ಷಾ ಕೇಂದ್ರದಲ್ಲಿಯೇ ಜೆರಾಕ್ಸ್ ಯಂತ್ರ, ವಿದ್ಯಾರ್ಥಿಗಳಿಗೆ ಜೆರಾಕ್ಸ್ ಮಾಡಿದ ಉತ್ತರ ಪತ್ರಿಕೆ ನೀಡಿರುವುದು, 3–-4 ವಿದ್ಯಾರ್ಥಿಗೊಬ್ಬರಂತೆ ಜೆರಾಕ್ಸ್ ಮಾಡಿದ ಪ್ರಶ್ನೆ ಪತ್ರಿಕೆ ವಿತರಿಸಿರುವುದು, ಒಂದೇ ಬೆಂಚಿನಲ್ಲಿ ಮೂವರು ಪರೀಕ್ಷಾರ್ಥಿಗಳನ್ನು ಕೂರಿಸಿದ್ದುದು ದಾಳಿ ವೇಳೆ ಪತ್ತೆಯಾಗಿದೆ.
ಇದಲ್ಲದೆ ಸಾಮೂಹಿಕ ನಕಲು, ನಕಲಿ ವಿದ್ಯಾರ್ಥಿಗಳ ಹಾವಳಿ, ಪರೀಕ್ಷಾರ್ಥಿಗಳಿಗೆ ಮೊಬೈಲ್ ಬಳಸಲು ಅವಕಾಶ ಮಾಡಿಕೊಟ್ಟಿರುವುದೂ ಸೇರಿದಂತೆ ಹಲವಾರು ಕಾನೂನುಬಾಹಿರ ಚಟುವಟಿಕೆಗಳು ಬೆಳಕಿಗೆ ಬಂದಿವೆ.
ಈ ಪರೀಕ್ಷಾ ಕೇಂದ್ರಗಳಲ್ಲಿ ಅಂದಾಜು 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ನಾಗರಬೆಟ್ಟ ಪರೀಕ್ಷಾ ಕೇಂದ್ರವೊಂದರಲ್ಲೇ ರಾಯಚೂರು, ಕಲಬುರ್ಗಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಐಟಿಐ ಕಾಲೇಜುಗಳ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದುದು ಸಹ ದಾಳಿ ವೇಳೆ ಬಹಿರಂಗಗೊಂಡಿದೆ.
‘ನಮ್ಮಿಂದ ಸುಮಾರು ₨ 20 ರಿಂದ 40 ಸಾವಿರ ವಸೂಲಿ ಮಾಡಲಾಗಿದೆ’ ಎಂದು ಕೆಲವರು ದೂರಿದರೆ, ‘ನಾವು ಬೇರೊಬ್ಬರ ಪರವಾಗಿ ಪರೀಕ್ಷೆ ಬರೆ ಯಲು ಬಂದಿದ್ದೇವೆ...’ ಎಂದು ಕೆಲವರು ಲಿಖಿತ ರೂಪದಲ್ಲಿ ಉಪವಿಭಾಗಾಧಿಕಾರಿ ಅವರಿಗೆ ನೀಡಿದ್ದಾರೆ.
ನಿಯಮ ಉಲ್ಲಂಘನೆ: ‘ಮುದ್ದೇಬಿ ಹಾಳದ ಜ್ಞಾನಭಾರತಿ ಕೇಂದ್ರ ಹಾಗೂ ನಾಗರಬೆಟ್ಟದ ಜೈನ್ ಐಟಿಐ ಕಾಲೇಜುಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು ಭಾರಿ ಪರೀಕ್ಷಾ ಅವ್ಯವಹಾರ ಪತ್ತೆಯಾಗಿದೆ. ನಕಲಿ ವಿದ್ಯಾರ್ಥಿಗಳು ಸಹ ಪತ್ತೆಯಾಗಿದ್ದು, ಒಟ್ಟಾರೆ ಪರೀಕ್ಷಾ ನಿಯಮಗಳನ್ನು ಸಂಪೂರ್ಣ ಗಾಳಿಗೆ ತೂರಿರುವುದು ಕಂಡುಬಂದಿದೆ. ದಾಳಿಯ ಸಮಗ್ರ ವರದಿಯನ್ನು ವಿಡಿಯೊ ಸಮೇತ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುತ್ತದೆ’ ಎಂದು ಪರಶುರಾಮ ಹೇಳಿದರು.
‘ನಮ್ಮ ಕೇಂದ್ರಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ದಾಳಿ ನಡೆಸ ಲಾಗಿದೆ. ನಾವು ಸರ್ಕಾರದ ನಿಯಮ ಮೀರಿ ಪರೀಕ್ಷೆ ನಡೆಸುತ್ತಿಲ್ಲ. ನಮ್ಮ ಸಂಸ್ಥೆಯ ಹೆಸರು ಕೆಡಿಸಲು ನಡೆಸಿರುವ ಕುತಂತ್ರ ಇದು. ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾದರೆ ಕಾನೂನು ಹೋರಾಟ ನಡೆಸುತ್ತೇವೆ’ ಎಂದು ನಾಗರಬೆಟ್ಟ ಜೈನ್ ಐಟಿಐ ಕಾಲೇಜಿನ ಸಿದ್ಧನಗೌಡ ಧನ್ನೂರ ಮತ್ತು ಮುದ್ದೇಬಿಹಾಳದ ಸರ್ ಎಂ. ವಿಶ್ವೇಶ್ವರಯ್ಯ ಐಟಿಐ ಕಾಲೇಜಿನ ರವಿ ನಾಯಕ ಸುದ್ದಿಗಾರರಿಗೆ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.