ನವದೆಹಲಿ (ಪಿಟಿಐ): ‘ಮುಸ್ಲಿಂ ಸಹೋದರರು ಸೇರಿದಂತೆ ದೇಶದ ಎಲ್ಲ ನಾಗರಿಕರನ್ನು ನಾನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ’ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದ್ದಾರೆ.
ಎಬಿಪಿ ನ್ಯೂಸ್ ಚಾನೆಲ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಮಮಂದಿರ ಮತ್ತು ಏಕರೂಪ ನಾಗರಿಕ ಸಂಹಿತೆಯಂತಹ ವಿವಾದಾಸ್ಪದ ವಿಷಯಗಳನ್ನು ಸಂವಿಧಾನದ ಚೌಕಟ್ಟಿನಲ್ಲಿ ಪರಿಹರಿಸಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ. ‘ಎಲ್ಲ ಭಾರತೀಯರನ್ನು ಒಂದು ಎಂದು ಪರಿಗಣಿಸುತ್ತೇನೆ ಮತ್ತು ಮುಸ್ಲಿಮರು ಸೇರಿದಂತೆ ಸಮಾಜದ ಎಲ್ಲ ವರ್ಗದವರನ್ನು ತಲುಪುವುದು ನನ್ನ ಜವಾಬ್ದಾರಿಯಾಗಿದೆ’ ಎಂದಿದ್ದಾರೆ..
ಗುಜರಾತ್ ಮುಖ್ಯಮಂತ್ರಿಯಾಗಿರುವ ನಾನು ರಾಜ್ಯದ ಆರು ಕೋಟಿ ಜನರ ವಿಶ್ವಾಸ ಗಳಿಸಲು ಸಾಧ್ಯವಾದಷ್ಟು ಪ್ರಯತ್ನಿಸುತ್ತಿದ್ದೇನೆ. ಈಗ ನನ್ನ ಮೇಲೆ ರಾಷ್ಟ್ರೀಯ ಹೊಣೆಗಾರಿಕೆ ಇದೆ. ಹೀಗಾಗಿ 125 ಕೋಟಿ ಜನರ ವಿಶ್ವಾಸ ಗಳಿಸಲು ಎಲ್ಲ ರೀತಿಯಿಂದಲೂ ಶ್ರಮಿಸುತ್ತೇನೆ. ಇದು ನನ್ನ ಕರ್ತವ್ಯ ಮತ್ತು ನಾನು ಅದನ್ನು ಮಾಡುತ್ತೇನೆ’ ಎಂದೂ ಹೇಳಿದ್ದಾರೆ.
ಮುಸ್ಲಿಮರು ಸೇರಿದಂತೆ ಎಲ್ಲರನ್ನು ತಲುಪಲು ನೀವು ಪ್ರಯತ್ನಿಸಲಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೋದಿ, ‘ನೀವು ಬಳಸುತ್ತಿರುವ ಪರಿಭಾಷೆಯ ಪ್ರಕಾರ ನಾನೆಂದೂ ಮುಂದುವರಿಯುವುದಿಲ್ಲ. ಒಂದುವೇಳೆ ನೀವು ನನ್ನನ್ನು ಎಳೆದರೂ, ನಾನು ಅದನ್ನು ಮಾಡುವುದಿಲ್ಲ. ನಾನು ನನ್ನ ದೇಶದ ಜನರನ್ನು ಭೇಟಿಯಾಗುತ್ತೇನೆ. ದೇಶದ ಜನರೆಲ್ಲ ನನ್ನವರು, ನನ್ನ ಸಹೋದರರು ಎಂಬ ಒಂದೇ ಭಾಷೆ ನನಗೆ ಗೊತ್ತು. ನೀವು ನನ್ನ ಬಗ್ಗೆ ಏನಾದರೂ ಅಂದುಕೊಳ್ಳಬಹುದು. ಆದರೆ, ನಾನು ಹಾಗಿಲ್ಲ’ ಎಂದಿದ್ದಾರೆ.
‘ಮೋದಿ ಅಭಿವೃದ್ಧಿಯ ಮುಖವಾಡ ಕಳಚಿ ಬಿದ್ದಿದೆ. ಅವರು ಹೇಗಾದರೂ ಮಾಡಿ ಅಧಿಕಾರಕ್ಕೆ ಬರಲು ಪ್ರಯತ್ನ ನಡೆಸುತ್ತಿದ್ದಾರೆ. ಕೋಮು ದ್ವೇಷದ ಭಾಷಣಗಳು ಪೂರ್ವನಿರ್ಧರಿತ ಮತ್ತು ಸಂಚಿನ ಭಾಗ’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ್ ಆರೋಪಿಸಿದ್ದಾರೆ.