ಭಾರತೀಯ ಸಂವಿಧಾನಕ್ಕೆ ೬೪ ವರ್ಷಗಳು ತುಂಬಿದ ಸಮಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರು ವಸಂತ ತುಂಬುತ್ತಿದೆ.
ಇಂತಹ ಐತಿಹಾಸಿಕ ಸಂದರ್ಭದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಎಂದು ನೊಂದವರ ಸಾಹಿತ್ಯದ ಪ್ರತಿನಿಧಿ ದೇವನೂರ ಮಹಾದೇವ ಅವರ ಮನೆಗೆ ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿಯವರು ಹೋದದ್ದು ಸರಿಯಾಗಿದೆ.
ದುರಂತವೆಂದರೆ ಕಸಾಪ ಮಾಜಿ ಅಧ್ಯಕ್ಷ ಪ್ರೊ. ಚಂಪಾ ಅವರು ‘ಹಾಲಂಬಿ ಅವರೇ ಮನೆಗೆ ಹೋಗಿ ಆಹ್ವಾನಿಸುವ ಅಗತ್ಯವಿರಲಿಲ್ಲ’ ಎನ್ನುತ್ತಾರೆ (‘ದೇವನೂರರ ಅತಿರೇಕ ನಿಲುವು-’, ಪ್ರ.ವಾ., ಡಿ. ೨೧). ಸಾಹಿತ್ಯಕ ವಲಯದ ಸಾಮಾಜಿಕ ನ್ಯಾಯದ ಆಹ್ವಾನಕ್ಕೆ ದೇವನೂರರು ತಮ್ಮದೇ ಧಾಟಿಯಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮಕ್ಕಾಗಿ ಒತ್ತಾಯಿಸಿ ಆ ಆಹ್ವಾನವನ್ನು ತಿರಸ್ಕರಿಸಿದರು.
ಅಲ್ಲದೇ 1ರಿಂದ ೧೦ನೇ ತರಗತಿವರೆಗೆ ಕನ್ನಡ ಮಾಧ್ಯಮ ಶಿಕ್ಷಣ ಜಾರಿಗೊಳಿಸಲು ಪರಿಷತ್ ಬೀದಿಗಿಳಿಯಲಿ ಎಂದೂ ದೇವನೂರರು ಕಸಾಪಕ್ಕೇ ಒಂದು ನಿರ್ದಿಷ್ಟ ಕಾರ್ಯಕ್ರಮ ಕೊಟ್ಟರು. ಆ ಮೂಲಕ ಸಮ್ಮೇಳನದ ಅಧ್ಯಕ್ಷಗಿರಿ ತಿರಸ್ಕರಿಸಿಯೂ ದೇವನೂರರು ಕನ್ನಡ ಕಳಕಳಿಯ ಜೀವಪರ ನಿಲುವು ತಳೆದರು.
ಪ್ರಶ್ನೆಯೇನೆಂದರೆ ದೇವನೂರರ ಇಂತಹ ನಿಲುವು ಅತಿರೇಕದ ನಿಲುವು ಹೇಗಾಗುತ್ತದೆ? ಅದೇ ಮಾತುಕತೆಯಲ್ಲಿ ವರಕವಿ ಬೇಂದ್ರೆ ಅವರನ್ನು ‘ಸಣ್ಣ ಮನುಷ್ಯ, ಜಾತಿವಾದಿ, ಪುರೋಹಿತಶಾಹಿ’ ಎಂದಿರುವ ಚಂಪಾ, ತಾವೇ ಕಸಾಪ ಅಧ್ಯಕ್ಷರಾಗಿದ್ದಾಗ ನಡೆಸಿದ ಸಾಹಿತ್ಯ ಸಮ್ಮೇಳನಗಳಲ್ಲಿ ದಲಿತರನ್ನು ಅಧ್ಯಕ್ಷರನ್ನಾಗಿ ನಿಯುಕ್ತಿಗೊಳಿಸಲಿಲ್ಲ!
ಹಾಗೆಯೇ ಬೇಂದ್ರೆಯವರನ್ನು ವೈಯಕ್ತಿಕವಾಗಿ ಜಾತಿವಾದಿಯಾಗಿದ್ದರು ಎಂದಿರುವ ಪ್ರಗತಿಪರರಾದ ಚಂಪಾ ಅವರು ಪ್ರಗತಿಪರತೆಯ ಅಂತಹ ಪ್ರಮುಖ ಲಕ್ಷಣವಾದ ಸಾಮಾಜಿಕ ನ್ಯಾಯವನ್ನು ತಮ್ಮ ಅವಧಿಯ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಎತ್ತಿಹಿಡಿಯಲಿಲ್ಲ!
ನಿಜ ಹೇಳಬೇಕೆಂದರೆ ಈ ಬಾರಿ ಮೂಕನಿಗೆ ಬಾಯಿ ಬಂದಿದೆ. ಈ ನಿಟ್ಟಿನಲ್ಲಿ ಅಂತಹ ಮೂಕರ ಮಾತುಗಳನ್ನು ಪ್ರತಿಯೊಬ್ಬರೂ ಗೌರವಿಸಲಿ.
–ರಘೋತ್ತಮ ಹೊ.ಬ., ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.