ಕರ್ನಾಟಕ ರಾಜ್ಯ ಪಂಚಾಯತ್ ಪರಿಷತ್ ಸಭೆಯಲ್ಲಿ ಮುಖ್ಯಮಂತ್ರಿ ಅವರು ಮೂರು ಹಂತದ ಪಂಚಾಯಿತಿ ವ್ಯವಸ್ಥೆಯಿಂದ
ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳು ಸಾಗುತ್ತಿಲ್ಲ. ಹೀಗಾಗಿ ಎರಡು ಹಂತದ ವ್ಯವಸ್ಥೆಯೇ ಸೂಕ್ತ ಎಂದಿರುವುದು ಅಶ್ಚರ್ಯದ ಜತೆಗೆ ನೋವನ್ನು ಉಂಟುಮಾಡಿದೆ.
ತಳಸಮುದಾಯಗಳ ನೋವು–ತಲ್ಲಣ ಕಂಡವರು, ವಿಕೇಂದ್ರೀಕರಣವನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವುದರ ಬದಲು, ಅದನ್ನು ಮೊಟಕುಗೊಳಿಸಿ ಯುವಕರ ರಾಜಕೀಯ ಪ್ರವೇಶಕ್ಕೆ ತಿಲಾಂಜಲಿ ಇಡಲು ಹೊರಟಿರುವುದು ವಿಷಾದನೀಯ.
ನಿರುದ್ಯೋಗ ಸಮಸ್ಯೆಯನ್ನು ವಿಕೇಂದ್ರೀಕರಣದಿಂದ ತಕ್ಕಮಟ್ಟಿಗೆ ನಿವಾರಿಸಬಹುದು. ಮೂರು ಹಂತದ ಪಂಚಾಯಿತಿ ವ್ಯವಸ್ಥೆಗೆ ಕಾರ್ಯ ನಿರ್ವಹಣಾ ಅಧಿಕಾರಿಗಳು, ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಯುವಕರು ಮತ್ತು ತಳಸಮುದಾಯದ ಚುನಾಯಿತ ಪ್ರತಿನಿಧಿಗಳಿಗೆ ರಾಜಕೀಯ ಐಡೆಂಟಿಟಿ ಜೊತೆಗೆ ಸ್ಥಾನಮಾನಗಳು ದೊರೆಯುತ್ತವೆ.
ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾ-ಯಿತಿಗಳಿಗೆ ಹೆಚ್ಚಿನ ಹಾಗೂ ಪ್ರತ್ಯೇಕ ಅಧಿಕಾರ, ಅನುದಾನ ನೀಡಬೇಕು. ಚುನಾವಣೆ ಮೂಲಕ ಪ್ರತಿನಿಧಿಗಳು ಆಯ್ಕೆಯಾಗಿ ಪರಿಣಾಮಕಾರಿಯಾಗಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುವಂತೆ ಈಗಿರುವ ಮೂರು ಹಂತದ ಪಂಚಾಯಿತಿಗಳು ಬಲಗೊಳ್ಳಲಿ.