ಬೆಂಗಳೂರು: ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯ ನಾಯ್ಡು ಭಾನುವಾರ ‘ನಮ್ಮ ಮೆಟ್ರೊ’ ರೈಲಿನಲ್ಲಿ ಸಂಚರಿಸಿ ಪ್ರಯಾಣಿಕರ ಜೊತೆ ಚರ್ಚೆ ನಡೆಸಿದರು.
ಬೆಳಗ್ಗೆ 8.15ರ ಸುಮಾರಿಗೆ ಸಂಪಿಗೆ ರಸ್ತೆ ಮೆಟ್ರೊ ನಿಲ್ದಾಣದಿಂದ ನಾಗಸಂದ್ರವರೆಗೆ ತೆರಳಿದರು. ನಾಗಸಂದ್ರ ಸಮೀಪದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮರಳಿ ನಾಗಸಂದ್ರದಿಂದ ಸಂಪಿಗೆ ರಸ್ತೆವರೆಗೆ ಮೆಟ್ರೊದಲ್ಲಿಯೇ ವಾಪಸಾದರು.
ಈ ಸಂದರ್ಭದಲ್ಲಿ ಪ್ರಯಾಣಿಕರೊಂದಿಗೆ ಚರ್ಚೆಯನ್ನೂ ನಡೆಸಿದರು. ಮೆಟ್ರೊದಿಂದ ಅನುಕೂಲ ಆಗಿದೆಯೇ? ಇನ್ನೂ ಏನಾದರೂ ಹೊಸ ವ್ಯವಸ್ಥೆಗಳು, ಸೌಲಭ್ಯಗಳ ಅಗತ್ಯ ಇದೆಯೇ? ಎಂಬಂತಹ ಪ್ರಶ್ನೆಗಳನ್ನು ಕೇಳಿದರು.
ಬಹುತೇಕ ಪ್ರಯಾಣಿಕರು ಮೆಟ್ರೊದಿಂದ ತಮಗೆ ಅನುಕೂಲ ಆಗಿದೆ ಎಂಬ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸಂಪಿಗೆ ರಸ್ತೆಯಿಂದ ಕೆಂಪೇಗೌಡ ಬಸ್ ನಿಲ್ದಾಣವರೆಗೂ ಬೇಗ ಸಂಪರ್ಕ ಕಲ್ಪಿಸಿದರೆ ಇನ್ನೂ ಹೆಚ್ಚಿನ ಅನುಕೂಲ ಆಗುತ್ತದೆ ಎಂದು ಹೇಳಿದ್ದಾರೆ.
‘ಸಂಪಿಗೆ ರಸ್ತೆಯಿಂದ ಮೆಜೆಸ್ಟಿಕ್ವರೆಗಿನ ಕಾಮಗಾರಿ ಪ್ರಗತಿಯಲ್ಲಿದೆ. ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗುವುದು’ ಎಂಬ ಭರವಸೆಯನ್ನು ಪ್ರಯಾಣಿಕರಿಗೆ ನೀಡಿದರು ಎಂದು ಪ್ರತ್ಯಕ್ಷದರ್ಶಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.