ಬೆಂಗಳೂರು: ‘ನಮ್ಮ ಮೆಟ್ರೊ’ದ ಸುರಂಗ ನಿರ್ಮಾಣ ಕಾರ್ಯದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಚಿಕ್ಕಪೇಟೆಯ ಮಟನ್ ಮಾರ್ಕೆಟ್ ಬಳಿ ವಸತಿ ಗೃಹಗಳು ಸೇರಿದಂತೆ ಕೆಲ ಕಟ್ಟಡಗಳಿಂದ ಜನರನ್ನು ತಾತ್ಕಾಲಿಕವಾಗಿ ಖಾಲಿ ಮಾಡಿಸಲಾಯಿತು.
ನೆಲ ಮಟ್ಟದಿಂದ 60 ಅಡಿಗಳಷ್ಟು ತಳಭಾಗದಲ್ಲಿ ‘ಸುರಂಗ ಕೊರೆಯುವ ಯಂತ್ರ’ (ಟಿಬಿಎಂ) ಸುರಂಗ ಕೊರೆಯುವಾಗ ಮೇಲ್ಭಾಗದಲ್ಲಿರುವ ಹಳೆ ಮತ್ತು ಶಿಥಿಲ ಕಟ್ಟಡಗಳಿಗೆ ಹಾನಿ ಹಾನಿ ಆಗಬಾರದೆಂಬ ಕಾರಣಕ್ಕೆ ಈ ಮುಂಜಾಗ್ರತೆ ವಹಿಸಲಾಗಿದೆ.
‘ಸುರಂಗ ಕಾಮಗಾರಿ ನಡೆಯುವ ಜಾಗದ ಮೇಲ್ಭಾಗದಲ್ಲಿ 10ರಿಂದ 15 ಚದರ ಮೀಟರ್ಗಳಷ್ಟು ವಿಸ್ತೀರ್ಣದ ಜಾಗವನ್ನು ಪ್ರಭಾವ ವಲಯ ಎಂದು ಗುರುತಿಸಲಾಗುತ್ತದೆ. ಆ ವಲಯದಲ್ಲಿ ಬರುವ ಕಟ್ಟಡಗಳು ಶಿಥಿಲಗೊಂಡಿದ್ದರೆ ಅಂತಹ ಕಟ್ಟಡಗಳಿಂದ ಮಾತ್ರ ಜನರನ್ನು ಸ್ಥಳಾಂತರಗೊಳಿಸಲಾಗುವುದು’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ಮುಖ್ಯ ಎಂಜಿನಿಯರ್ ಹೆಗ್ಗಾರಡ್ಡಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಸುರಂಗ ನಿರ್ಮಿಸುವಾಗ ಕಟ್ಟಡಗಳಿಗೆ ಹಾನಿ ಆದರೆ ಅವುಗಳನ್ನು ಗುತ್ತಿಗೆದಾರರು ದುರಸ್ತಿ ಮಾಡಿಸಿಕೊಡುತ್ತಾರೆ. ಸುರಂಗ ನಿರ್ಮಾಣ ಆದಂತೆಲ್ಲ ಟಿಬಿಎಂ ಮುಂದೆ ಸಾಗುತ್ತದೆ. ನಂತರ ಕಟ್ಟಡಗಳನ್ನು ಅವುಗಳ ಮಾಲೀಕರ ಮರು ವಶಕ್ಕೆ ಒಪ್ಪಿಸಲಾಗುವುದು. ಇದೊಂದು ನಿಯಮಿತವಾಗಿ ನಡೆಯುವ ಕಾರ್ಯ’ ಎಂದು ಅವರು ವಿವರಿಸಿದರು.