ಶಿಲ್ಲಾಂಗ್ (ಪಿಟಿಐ): ಭೀಕರ ಪ್ರವಾಹ ಮತ್ತು ಭೂಕುಸಿತದ ಪರಿಣಾಮ ಮೇಘಾಲಯದಲ್ಲಿ ಮಂಗಳವಾರ ಮತ್ತೆ ಮೂರು ಶವಗಳನ್ನು ಹೊರಕ್ಕೆ ತೆಗೆಯಲಾಗಿದ್ದು, ಈ ಮೂಲಕ ಮೃತಪಟ್ಟವರ ಸಂಖ್ಯೆ 55ಕ್ಕೆ ಏರಿದೆ ಎಂದು ಮುಖ್ಯ ಕಾರ್ಯದರ್ಶಿ ಬಾರ್ಕೋಸ್ ಒ ವಾರ್ಜ್ರಿ ತಿಳಿಸಿದ್ದಾರೆ.
ಅಧಿಕಾರಿಗಳು, ಪೊಲೀಸ್ ಇಲಾಖೆಯ ಸಿಬ್ಬಂದಿ ಮೃತಪಟ್ಟವರ ಗುರುತು ಪತ್ತೆ ಹಚ್ಚಲು ಪ್ರಯತ್ನ ನಡೆಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಈ ನಡುವೆ ಮುಖ್ಯಮಂತ್ರಿ ಮುಕುಲ್ ಸಂಗ್ಮ ಅವರು, ಪ್ರವಾಹದಿಂದಾಗಿ ತೊಂದರೆಗೆ ಸಿಲುಕಿದವರಿಗೆ ಸಹಾಯ ಮಾಡಲು ಮುಖ್ಯಮಂತ್ರಿ ಪರಿಹಾರ ನಿಧಿಗೆ ಉದಾರ ದೇಣಿಗೆ ನೀಡುವಂತೆ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.
ಪ್ರವಾಹದ ಭೀಕರತೆಯಿಂದಾಗಿ ರಸ್ತೆಗಳು, ಮನೆಗಳು, ವಸತಿಪ್ರದೇಶ ಮತ್ತು ಕೃಷಿಭೂಮಿ ಸೇರಿ ಒಟ್ಟು 2 ಸಾವಿರ ಕೋಟಿ ಹಾನಿಯಾಗಿದೆ ಎಂದು ಉಪಮುಖ್ಯಮಂತ್ರಿ ರೋಯಿತ್ರೆ ಸಿ. ಲಾಲೂ ಅವರು ಮಾಹಿತಿ ನೀಡಿದ್ದಾರೆ.