ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಸಮೀಪವೇ ಬಿ.ಎಂ.ಟಿ.ಸಿ ಬಸ್ ನಿಲ್ದಾಣ ಇದೆ. ಬೇರೆಡೆಯಿಂದ ಬರುವವರು ನಗರದ ವಿವಿಧ ಬಡಾವಣೆಗಳನ್ನು ಸುಲಭವಾಗಿ ತಲುಪಲು ಇದರಿಂದ ಅನುಕೂಲ.
ಸುಮಾರು 500 ಮೀಟರ್ ಉದ್ದದ ಚಾವಣಿ ಇಲ್ಲದ ಮೇಲ್ಸೇತುವೆ ಎರಡೂ ನಿಲ್ದಾಣಗಳ ನಡುವೆ ಸಂಪರ್ಕ ಕಲ್ಪಿಸುತ್ತದೆ. ಆದರೆ, ಬಿಸಿಲು, ಮಳೆಯಿಂದ ಪ್ರಯಾಣಿಕರಿಗೆ ರಕ್ಷಣೆ ಇಲ್ಲದ ಕಾರಣ ಜನರು ರಸ್ತೆಯ ಮೇಲೆಯೇ ನಡೆದು ಹೋಗುತ್ತಿದ್ದಾರೆ.
2015ರ ನವೆಂಬರ್ ತಿಂಗಳಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬರು ರಸ್ತೆ ದಾಟುವಾಗ ಬಸ್ ಹರಿದು ಮೃತಪಟ್ಟರು. ನಂತರ ಸಾರಿಗೆ ನಿಗಮದ ಸಿಬ್ಬಂದಿ ಪ್ರಯಾಣಿಕರಿಗೆ ಮೇಲ್ಸೇತುವೆ ಬಳಸಲು ಒತ್ತಡ ಹೇರುತ್ತಿದ್ದಾರೆ. ಆದರೆ ಮೇಲ್ಸೇತುವೆಗೆ ಚಾವಣಿ ನಿರ್ಮಿಸಲು ಕ್ರಮ ಕೈಗೊಳ್ಳುತ್ತಿಲ್ಲ.
ಮೇಲ್ಸೇತುವೆ ಮೇಲೆ ಕನಿಷ್ಠ ಪ್ಲಾಸ್ಟಿಕ್ ಶೀಟ್ ಹಾಕಿದರೂ ಜನರಿಗೆ ಅನುಕೂಲವಾಗುತ್ತದೆ. ಚಾವಣಿಗೆ ಸೌರ ಫಲಕ ಅಳವಡಿಸಿದರೆ ವಿದ್ಯುತ್ ಉತ್ಪಾದನೆಯೂ ಸಾಧ್ಯ.
ಕೆ.ಎಸ್.ಆರ್.ಟಿ.ಸಿ ಮತ್ತು ಬಿ.ಎಂ.ಟಿ.ಸಿ.ಯ ಹಿರಿಯ ಅಧಿಕಾರಿಗಳು ಶೀಘ್ರ ಇತ್ತ ಗಮನ ಹರಿಸಬೇಕು.