ಮಂಡ್ಯ: ಪ್ರಭಾವಿ ರಾಜಕಾರಣಿ ಪುತ್ರ ಕಾರ್ತಿಕ್ ಗೌಡ ವಿರುದ್ಧ ಸುಳ್ಳು ಆರೋಪ ಮಾಡಿರುವ, ಸಿನಿಮಾ ನಟಿ ಮೈತ್ರೇಯಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಶನಿವಾರ ಎಸ್ಪಿಗೆ ದೂರು ನೀಡಿದ್ದಾರೆ.
ಕೇಂದ್ರ ರೈಲ್ವೆ ಸಚಿವ ಡಿ.ವಿ. ಸದಾನಂದಗೌಡ ಅವರ ಪುತ್ರ ಕಾರ್ತಿಕ್ ಗೌಡ ಅವರ ಮೇಲೆ ನಾಗಮಂಗಲ ಮೂಲದ ಸಿನಿಮಾ ನಟಿ ಮೈತ್ರೇಯಿ ಸುಳ್ಳು ಆರೋಪ ಮಾಡಿದ್ದಾರೆ. ಸದಾನಂದಗೌಡ ಅವರ ಏಳಿಗೆಯನ್ನು ಸಹಿಸದ ಕೆಲ ರಾಜಕೀಯ ಮುಖಂಡರು ಮೈತ್ರೇಯಿ ಅವರನ್ನು ಮುಂದಿಟ್ಟುಕೊಂಡು ಕುತಂತ್ರ ನಡೆಸುತ್ತಿದ್ದಾರೆ. ಇದರಲ್ಲಿ ಕಾಂಗ್ರೆಸ್ನ ಪ್ರಭಾವಿ ನಾಯಕರ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ರಾಜಕಾರಣಿಗಳು, ಚಿತ್ರನಟರು ಹಾಗೂ ಕ್ರೀಡಾಪಟುಗಳ ಜತೆ ಸಾರ್ವಜನಿಕರು ಫೋಟೊ ತೆಗೆಸಿಕೊಳ್ಳುವುದು ಸಾಮಾನ್ಯ. ಹಾಗೆಯೇ ಗೌಡರು ಕೇಂದ್ರದಲ್ಲಿ ಪ್ರಭಾವಿ ನಾಯಕರಾಗಿರುವ ಕಾರಣ ಅವರ ಪುತ್ರ ಕಾರ್ತಿಕ್ಗೌಡ ಅವರೊಂದಿಗೆ ಮೈತ್ರೇಯಿ ಸಾರ್ವಜನಿಕವಾಗಿ ಫೋಟೊ ತೆಗೆಸಿಕೊಂಡಿದ್ದಾರೆ.
ಈ ಫೋಟೊ ಮುಂದಿಟ್ಟುಕೊಂಡು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಮೈತ್ರೇಯಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಬಿಜೆಪಿ ಮುಖಂಡರಾದ ಸಿದ್ದರಾಜು, ಮಹಂತಪ್ಪ, ಸಿ.ಟಿ. ಮಂಜುನಾಥ್, ಕೆ.ಎಸ್. ಮಲ್ಲಿಕಾರ್ಜುನ, ಪ.ಲಿ. ಕೃಷ್ಣ ಹಾಜರಿದ್ದರು.