ನವದೆಹಲಿ: ಪ್ರತಿ ಮೊಬೈಲ್ ಕಳವು ಪ್ರಕರಣದ ಬಗ್ಗೆ ಕಡ್ಡಾಯವಾಗಿ ಎಫ್ಐಆರ್ ದಾಖಲಿಸುವ ಜತೆಗೆ ಅಂತಹ ಮೊಬೈಲ್ಗೆ ತಕ್ಷಣವೇ ಸಂಪರ್ಕ ಸೇವೆ ರದ್ದುಗೊಳಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುವಂತೆ ದೂರಸಂಪರ್ಕ ಇಲಾಖೆಯು (ಡಿಒಟಿ) ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದೆ.
ಕಳುವಾದ ಮೊಬೈಲ್ಗಳು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ವಿದ್ರೋಹಿ ಚಟುವಟಿಕೆಗಳಿಗೆ ಬಳಕೆಯಾಗುತ್ತಿರುವುದನ್ನು ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ.
ಮೊಬೈಲ್ ಕಳವು ಪ್ರಕರಣಗಳ ಬಗ್ಗೆ ಕಡ್ಡಾಯವಾಗಿ ಎಫ್ಐಆರ್ ದಾಖಲಿಸಿ, ಸೇವೆ ಕಡಿತಗೊಳಿಸಿದರೆ ಅದು ದುಷ್ಕೃತ್ಯಗಳಿಗೆ ಬಳಕೆಯಾಗುವುದನ್ನು ತಡೆಯಬಹುದು. ಜತೆಗೆ ಇದರಿಂದ ಮೊಬೈಲ್ ಕಳವು ಪ್ರಮಾಣವೂ ತಗ್ಗಬಹುದು ಎಂದು ಇಲಾಖೆ ಅಭಿಪ್ರಾಯಪಟ್ಟಿದೆ.
ಈಗ ಮೊಬೈಲ್ ಕಳವು ಪ್ರಕರಣದ ಬಗ್ಗೆ ಎಫ್ಐಆರ್ ದಾಖಲಿಸುವುದು ಕಡ್ಡಾಯವಲ್ಲ. ಬಹುತೇಕ ಪ್ರಕರಣಗಳಲ್ಲಿ ಮೊಬೈಲ್ ಕಳೆದುಕೊಂಡವರು ತಮಗೆ ಸೇವೆ ಒದಗಿಸುವ ಕಂಪೆನಿಗೆ ಕರೆ ಮಾಡಿ ‘ಸಿಮ್ ಕಾರ್ಡ್’ಗೆ ಯಾವುದೇ ಸೇವೆ ಒದಗಿಸದಂತೆ ಕೋರಿ, ಅದೇ ಅಂಕಿಗಳ ಸಿಮ್ ನೀಡುವಂತೆ ಮನವಿ ಮಾಡುತ್ತಾರೆ.
ಮೊಬೈಲ್ ಕಳೆದುಕೊಂಡವರು ಪೊಲೀಸರಿಗೆ ದೂರು ನೀಡಿದರೂ ಪೊಲೀಸರು ಆ ಬಗ್ಗೆ ಎಫ್ಐಆರ್ ದಾಖಲಿಸುವುದಿಲ್ಲ; ಕೇವಲ ಸ್ವೀಕೃತಿ ಪತ್ರ (ಅಕ್ನಾಲೆಜ್ಮೆಂಟ್) ನೀಡಿ ಸಾಗಹಾಕುತ್ತಾರೆ.