ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಸೂಕ್ಷ್ಮ ಪರಿಸರ ವಲಯದಲ್ಲಿ ಖಾಸಗಿ ಕಂಪೆನಿಯೊಂದು ಅಕ್ರಮವಾಗಿ ಮೊಬೈಲ್ ಗೋಪುರ ನಿರ್ಮಿಸುತ್ತಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ತಾಲ್ಲೂಕಿನಿಂದ ಕೇರಳದ ಕಲ್ಲಿಕೋಟೆಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ– 212ರಲ್ಲಿ ಮೊಬೈಲ್ ಗೋಪುರ ನಿರ್ಮಿಸಲಾಗುತ್ತಿದೆ. ತಾಲ್ಲೂಕು ಕೇಂದ್ರದಿಂದ 20 ಕಿ.ಮಿೇ. ಮತ್ತು ಕರ್ನಾಟಕದ ಗಡಿಯಿಂದ ಕೆಲವೇ ಕಿಲೋಮೀಟರ್ ಅಂತರದಲ್ಲಿ ನಿರ್ಮಾಣವಾಗುತ್ತಿದೆ. ಮದ್ದೂರು ಅರಣ್ಯ ವಲಯ ಕಚೇರಿಯಿಂದ ಕೆಲವೇ ಅಡಿಗಳ ದೂರದಲ್ಲಿ ಅಕ್ರಮವಾಗಿ ಕಾಮಗಾರಿ ನಡೆಯುತ್ತಿರುವುದು ಅಚ್ಚರಿಯ ಸಂಗತಿ.
ಮೊಬೈಲ್ ಗೋಪುರ ನಿರ್ಮಾಣವಾಗುತ್ತಿರುವ ಪ್ರದೇಶವು ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಸೂಕ್ಷ್ಮ ಪರಿಸರ ವಲಯದ ‘ಬಿ’ ಗುಂಪಿಗೆ ಸೇರಿದೆ. ಸರ್ಕಾರದ ಆದೇಶದಂತೆ ಇಲ್ಲಿ ಯಾವುದೇ ರೀತಿಯ ವಾಣಿಜ್ಯ ಉದ್ದೇಶಗಳಿಗಾಗಿ ಭೂ ಬಳಕೆಯಾಗಲಿ ಅಥವಾ ಯಾವುದೇ ನಿರ್ಮಾಣವಾಗಲಿ ಕೈಗೊಳ್ಳುವಂತಿಲ್ಲ.
ಈ ಆದೇಶ ಜಾರಿಗೂ ಮೊದಲೇ ಇಲ್ಲಿ ಸರ್ಕಾರಿ ಸ್ವಾಮ್ಯದ ಕಂಪೆನಿಯೊಂದರ ಮೊಬೈಲ್ ಗೋಪುರ ನಿರ್ಮಾಣವಾಗಿದೆ. ಆದರೆ, ಆದೇಶ ಜಾರಿಯಾದ ನಂತರ ಖಾಸಗಿ ಕಂಪೆನಿಯೊಂದು ಇಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಟವರ್ ನಿರ್ಮಿಸುತ್ತಿದ್ದು, ಆದೇಶ ಉಲ್ಲಂಘಿಸಿದೆ.
ವ್ಯವಸಾಯಕ್ಕೆಂದು ಗುರುತಿಸಲಾದ ಭೂಮಿಯಲ್ಲೇ ಈ ಟವರ್ ನಿರ್ಮಾಣವಾಗುತ್ತಿದೆ. ಮದ್ದೂರು ಗ್ರಾಮದ ನಿವಾಸಿ ಬಸವೇಗೌಡ ಎಂಬುವವರು ತಿಂಗಳ ಬಾಡಿಗೆ ಆಧಾರದ ಮೇಲೆ ಭೂಮಿ ನೀಡಿದ್ದಾರೆ. ಉತ್ತರಪ್ರದೇಶದಿಂದ ಬಂದಿರುವ ಸುಮಾರು 10 ಮಂದಿ ಕಾರ್ಮಿಕರು ಗೋಪುರ ನಿರ್ಮಿಸುತ್ತಿದ್ದಾರೆ. ಬೆಂಗಳೂರಿನ ಕಾರ್ಖಾನೆಯೊಂದು ಕಬ್ಬಿಣದ ವಸ್ತುಗಳನ್ನು ಪೂರೈಸುತ್ತಿದೆ.
ಈ ಅನಧಿಕೃತ ನಿರ್ಮಾಣದ ಬಗ್ಗೆ ಅರಣ್ಯ ಇಲಾಖೆ ಅಥವಾ ಬೇರಂಬಾಡಿ ಗ್ರಾಮ ಪಂಚಾಯಿತಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ನಿರಾಕ್ಷೇಪಣ ಪತ್ರಕ್ಕೆ ಸೂಚನೆ
ಅನುಮತಿ ಪಡೆಯಲು ಜಮೀನು ಮಾಲೀಕರು ಬಂದಿದ್ದರು. ಅರಣ್ಯ ಇಲಾಖೆಯಿಂದ ನಿರಾಕ್ಷೇಪಣ ಪತ್ರ ತಂದ ನಂತರ ಅನುಮತಿ ನೀಡಲಾಗುವುದು ಎಂದು ತಿಳಿಸಿದ್ದೇನೆ.
– ಸುದರ್ಶನ್, ಕಾರ್ಯದರ್ಶಿ, ಬೇರಂಬಾಡಿ ಗ್ರಾಮ ಪಂಚಾಯಿತಿ