ಅಹಮದಾಬಾದ್: ನಿಯೋಜಿತ ಪ್ರಧಾನಿ ಮೋದಿ ಅವರು ಗುರುವಾರ ತವರು ರಾಜ್ಯ ಗುಜರಾತ್ನಿಂದ ದೆಹಲಿಗೆ ಪಯಣ ಬೆಳೆಸಿದರು.
ದೆಹಲಿಗೆ ತೆರಳುವ ಮುನ್ನ ಮೋದಿ ಅವರು ತಮ್ಮ ತಾಯಿ 94 ವರ್ಷದ ಹೀರಾಬಾ ಅವರ ಬಳಿ ತೆರಳಿ ಆಶೀರ್ವಾದ ಪಡೆದರು.
ಭಾವುಕರಾದ ಹೀರಾಬಾ, ಹೊಸ ಸವಾಲು ಎದುರಿಸಲು ಮಗನಿಗೆ ₨101 ನೀಡಿ ಆಶೀರ್ವಾದಿಸಿದರು. ಮೋದಿ ಅವರಿಗೆ ಸಿಹಿ ತಿನ್ನಿಸಿ, ಸೀರೆಗೆ ಸಿಕ್ಕಿಸಿಕೊಂಡಿದ್ದ ಟವೆಲ್ನಿಂದ ಮಗನ ಮುಖ ಒರೆಸಿದರು. ವಿಮಾನನಿಲ್ದಾಣದಲ್ಲಿ ಮೋದಿ ಅವರು ‘ಆವ್ಜೊ ಗುಜರಾತ್’ (ವಿದಾಯ) ಎನ್ನುತ್ತ ಎಲ್ಲರತ್ತ ಕೈಬೀಸಿ ನಡೆದರು.
ತಾಯಿ, ಪತ್ನಿಗೆ ಎಸ್ಪಿಜಿ ಭದ್ರತೆ: ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೂಡಲೇ ತಾಯಿ ಹೀರಾಬಾ ಹಾಗೂ ಪತ್ನಿ ಜಶೋದಾಬೆನ್ ಅವರು ಎಸ್ಪಿಜಿ ಭದ್ರತೆಯ ವ್ಯಾಪ್ತಿಗೆ ಒಳಪಡಲಿದ್ದಾರೆ. ಆದರೆ, ಅವರ ಮೂವರು ಸಹೋದರರು ಹಾಗೂ ಇಬ್ಬರು ಸಹೋದರಿಯರಿಗೆ ‘ಝಡ್’ ಶ್ರೇಣಿಯ ಭದ್ರತೆ ದೊರೆಯಲಿದೆ.
ಪ್ರಮಾಣವಚನಕ್ಕೆ ತಯಾರಿ: ಮೋದಿ ಅವರ ಪ್ರಮಾಣವಚನಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು, ರಾಷ್ಟ್ರಪತಿ ಭವನದ ಸಿಬ್ಬಂದಿ ತಯಾರಿಯಲ್ಲಿದ್ದಾರೆ.
ಸೋನಿಯಾ ಅಭಿನಂದನೆ: ಮೋದಿ ಅವರನ್ನು ಅಭಿನಂದಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಮಂಗಳವಾರವೇ ಪತ್ರ ಬರೆದಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಕಾಕ್ರಾ, ಢೋಕ್ಲಾ
ಗುಜರಾತಿ ಜನರ ಜನಪ್ರಿಯ ಆಹಾರಗಳಾದ ಕಾಕ್ರಾ, ಢೋಕ್ಲಾ ಇನ್ನು ಮುಂದೆ ಪ್ರಧಾನಿ ಕಚೇರಿಯಲ್ಲಿ ಲಭ್ಯವಾಗಲಿವೆ. ಗುಜರಾತ್ ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ಬುಧವಾರ ಮಾತನಾಡುವಾಗ ಮೋದಿ ಅವರು ಈ ಮಾತು ಹೇಳಿದಾಗ ಎಲ್ಲರೂ ನಕ್ಕುಬಿಟ್ಟಿದ್ದರು.
ಆದರೆ, ಗುರುವಾರ ಗುಜರಾತ್ಗೆ ವಿದಾಯ ಹೇಳಿ ದೆಹಲಿಗೆ ತೆರಳುವಾಗ 12 ವರ್ಷದಿಂದ ತಮಗೆ ಅಡುಗೆ ಮಾಡಿ ಹಾಕುತ್ತಿದ್ದ ಬಾಣಸಿಗ ಬದ್ರಿ ಎಂಬುವವರನ್ನು ಮೋದಿ ಜತೆಗೆ ಕರೆದೊಯ್ದರು. ಬದ್ರಿ, ಮೋದಿ ಅವರ ಬಾಣಸಿಗರಷ್ಟೇ ಅಲ್ಲ. 12 ವರ್ಷಗಳಿಂದ ಮೋದಿ ಅವರ ಬಂಗ್ಲೆಯಲ್ಲೇ ಉಳಿದುಕೊಂಡು, ಅವರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರು.`
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.