ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ- ಕ್ಸಿ ಮಾತುಕತೆ ನಡುವೆ ‘ಗಡಿ’ಬಿಡಿ

ಚುಮಾರ್‌ ಗಡಿಯಿಂದ ಸೈನಿಕರನ್ನು ವಾಪಸ್‌ ಕರೆಯಿಸಿಕೊಂಡ ಚೀನಾ
Last Updated 18 ಸೆಪ್ಟೆಂಬರ್ 2014, 19:52 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಗುರುವಾರದ ಭಾರಿ ನಿರೀಕ್ಷೆಯ ಮಾತುಕತೆಯನ್ನು ಗಡಿಯಲ್ಲಿ ಚೀನಾ ಸೇನೆ ನಡೆಸಿರುವ ಅತಿಕ್ರಮಣದ ಕರಿಛಾಯೆ ಮುಸುಕಿತು.  ಲಡಾಖ್‌ನ ಚುಮಾರ್‌, ಡೆಮ್‌ಚಾಕ್‌ ಗಡಿ ಪ್ರದೇಶಗಳಲ್ಲಿ ಬುಧವಾರ ಮತ್ತು ಗುರುವಾರ ಬೆಳಗಿನ ಜಾವ ಚೀನಾದ ಸಾವಿರಕ್ಕೂ ಹೆಚ್ಚು ಸೈನಿಕರು ಭಾರತದ ಭೂಪ್ರದೇಶಕ್ಕೆ ನುಗ್ಗಿರುವುದರಿಂದ ಉಭಯ ನಾಯಕರ ಸಭೆಯಲ್ಲಿ ಗಡಿ ಅತಿಕ್ರಮಣದ ಆತಂಕವೇ ಪ್ರಮುಖ­ವಾಗಿ ಪ್ರಸ್ತಾಪವಾಯಿತು.

ಈ ಮುಂಚೆ, ಈ ನಾಯಕರಿಬ್ಬರ ಭೇಟಿ ವೇಳೆ ಪರಸ್ಪರ ಆರ್ಥಿಕ ಚಟು­ವಟಿಕೆ ಉತ್ತೇಜಿಸುವ ಮಾತು­ಕತೆಯೇ ಪ್ರಾಮುಖ್ಯ ಪಡೆಯುತ್ತ­ದೆಂದು ಭಾವಿ­ಸ­ಲಾಗಿತ್ತು. ಆದರೆ ಕ್ಸಿ ಅವರು ಭಾರತಕ್ಕೆ ಭೇಟಿ ನೀಡಿರುವಾಗಲೇ ಆ ರಾಷ್ಟ್ರದ ಸೇನೆ ಅತಿಕ್ರಮಣ ನಡೆಸಿ­ರುವುದರಿಂದ ಗಡಿಯಲ್ಲಿ ಪದೇಪದೇ ಆ ರಾಷ್ಟ್ರ ತಂಟೆ ಎಸಗುತ್ತಿರುವ ಬಗ್ಗೆ ಪ್ರಧಾನಿ ಮೋದಿ ಅವರು ಧ್ವನಿ ಎತ್ತಿದರು.

ಈ ತಂಟೆಯ ಬಗ್ಗೆ ಗಂಭೀರವಾಗಿ ಪ್ರಸ್ತಾಪಿಸಿದ ಅವರು, ‘ವಾಸ್ತವ ಗಡಿ ರೇಖೆ’ಯನ್ನು ಅನುಮಾನಕ್ಕೆ ಎಡೆ­ಯಿಲ್ಲ­ದಂತೆ ಗುರುತಿಸುವುದು ಗಡಿಯಲ್ಲಿನ ಶಾಂತಿಗೆ ಅತಿಮುಖ್ಯ ಎಂದರು.

ಇದೇ ವೇಳೆ, ಭಾರತದಲ್ಲಿ ಮುಂದಿನ ಐದು ವರ್ಷದಲ್ಲಿ ಸುಮಾರು ೧.೨೦ ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಚೀನಾ

ಒಪ್ಪಂದಗಳು
*ವಾಣಿಜ್ಯ ವ್ಯವಹಾರಕ್ಕೆ ಸಂಬಂಧಿಸಿ 2 ಒಪ್ಪಂದಗಳು
*ಶಾಂತಿಯುತ ಉದ್ದೇಶ­ಕ್ಕಾಗಿ ಬಾಹ್ಯಾಕಾಶ ಬಳಕೆ
*ರೈಲ್ವೆಯಲ್ಲಿ ಸಹಕಾರ
*ಶಾಂಘೈ– ಮುಂಬೈ ಸಹೋದರ ನಗರಗಳಾಗಿ ಅಭಿವೃದ್ಧಿ
*ಆಡಿಯೊ, ವಿಡಿಯೊ ತಯಾರಿಕೆ
*ಸಾಂಸ್ಕೃತಿಕ ಸಂಸ್ಥೆಗಳ ನಡುವೆ ವಿನಿಮಯ
*ಸೀಮಾ ಸುಂಕಕ್ಕೆ ಸಂಬಂಧಿಸಿ ಒಪ್ಪಂದ

ಅಧ್ಯಕ್ಷ ಕ್ಸಿ ಪ್ರಕಟಿಸಿದರು. ಆದರೆ ಆ ರಾಷ್ಟ್ರದ ಸೈನಿಕರು ಗಡಿಯಲ್ಲಿ ನಡೆಸಿರುವ ಅತಿ­ಕ್ರಮಣ­ದಿಂದಾಗಿ ಈ ನಿರ್ಧಾರದ ಮಹತ್ವ ಮಸುಕುಗೊಂಡಿತು.

ಅತ್ತ ಗಡಿಯಲ್ಲಿನ ಈ ಉದ್ವಿಗ್ನತೆಯ ನಡುವೆಯೇ ಮೋದಿ ಮತ್ತು ಕ್ಸಿ ನಡುವೆ ಮೂರು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಯಿತು. ‘ಗಡಿಯಲ್ಲಿ ಶಾಂತಿ ಕಾಪಾಡಲು ಏರ್ಪಟ್ಟಿರುವ ಒಪ್ಪಂದಕ್ಕೆ ಎರಡೂ ರಾಷ್ಟ್ರಗಳು ಕಟಿಬದ್ಧ­ವಾಗಿರ­ಬೇಕು. ಜತೆಗೆ, ಉಭಯ ರಾಷ್ಟ್ರಗಳ ಗಡಿ ವಿವಾದವನ್ನು ಆದಷ್ಟು ಬೇಗನೇ ಇತ್ಯರ್ಥಗೊಳಿಸುವುದು ಅಗತ್ಯ’ ಎಂದು ಮೋದಿ ಅವರು ಒತ್ತಿ ಹೇಳಿದರು.

ಈ ನಡುವೆ ಗುರುವಾರ ರಾತ್ರಿ ಚೀನಾವು ಚುಮಾರ್‌ ಗಡಿಯಲ್ಲಿ ಭಾರತ ಭೂಭಾಗದೊಳಗೆ ಜಮಾಯಿ­ಸಿದ್ದ ಸೈನಿಕರನ್ನು ವಾಪಸ್‌ ಕರೆಯಿಸಿ­ಕೊಂಡಿದೆ.

‘ಚೀನಾವು ಭಾರತದ ಅತಿ ದೊಡ್ಡ ನೆರೆರಾಷ್ಟ್ರವಾಗಿದೆ. ನಮ್ಮ ಬಾಂಧವ್ಯದ ಅಗಾಧ ಸಾಮರ್ಥ್ಯವನ್ನು ಮನಗಾಣ­ಬೇಕಾದರೆ ಪರಸ್ಪರರ ಸೂಕ್ಷ್ಮತೆ– ಆದ್ಯತೆಗಳಿಗೆ ಸ್ಪಂದಿಸಿ ಗಡಿಯಲ್ಲಿ ಶಾಂತಿ, ಸ್ಥಿರತೆ ಸ್ಥಾಪಿಸುವುದು ಅತ್ಯಗತ್ಯ’ ಎಂದೂ ಮೋದಿ ಹೇಳಿದರು.

‘ಕ್ಸಿ ಅವರ ಭೇಟಿಯು ಉಭಯ ರಾಷ್ಟ್ರ­ಗಳ ಬಾಂಧವ್ಯ ವೃದ್ಧಿಗೆ ಚಾರಿತ್ರಿಕ ಅವಕಾಶವಾಗಿದೆ. ನಮ್ಮ

ಮುಂದಿರುವ ಅವಕಾಶಗಳು ಮತ್ತು ಸವಾಲುಗಳಿಗೆ ಸೂಕ್ಷ್ಮ ಸಂವೇದನೆ ಬೆಳೆಸಿಕೊಂಡರೆ ಎರಡೂ ರಾಷ್ಟ್ರಗಳು ದೊಡ್ಡ ಯಶಸ್ಸು ಸಾಧಿಸಬಹುದು. ‘ಚೀನಾ ಸೈನಿಕರು ಗಡಿ­ಯಲ್ಲಿ ಪದೇಪದೇ ಅತಿಕ್ರಮಣ ನಡೆ­ಸುತ್ತಿರುವ ಬಗ್ಗೆ ಕ್ಸಿ ಅವರೊಂದಿಗಿನ ಮಾತುಕತೆ ವೇಳೆ ಗಂಭೀರವಾಗಿ ಪ್ರಸ್ತಾ­ಪಿ­ಸಿದೆ. ನಮ್ಮ ಬಾಂಧವ್ಯದ ಶಕ್ತಿಯನ್ನು ಸಂಪೂರ್ಣ­­ವಾಗಿ ಬಳಸಿ­ಕೊಳ್ಳ­ಬೇಕೆಂ­ದರೆ,  ಪರಸ್ಪರ ನಂಬಿಕೆ– ವಿಶ್ವಾಸ ಬೆಳೆಯಬೇಕೆಂದರೆ ಗಡಿಯಲ್ಲಿನ ಶಾಂತಿ ವಾತಾವರಣವೇ ಅದಕ್ಕೆ ಬುನಾದಿ ಎಂಬ ಬಗ್ಗೆ ಇಬ್ಬರಲ್ಲೂ ಸಹಮತವಿದೆ.

ವಾಸ್ತವ ಗಡಿ ರೇಖೆ ನಿಷ್ಕರ್ಷಿಸುವ ನಿಟ್ಟಿನಲ್ಲಿ ಸ್ಥಗಿತವಾಗಿರುವ ಪ್ರಕ್ರಿಯೆ­ಯನ್ನು ಪುನರಾರಂಭಿಸಲು ಚೀನಾ ಅಧ್ಯಕ್ಷ­­ರಲ್ಲಿ ಮನವಿ ಮಾಡಿದ್ದೇನೆ’ ಎಂದು ಮೋದಿ ಅವರು ಕ್ಸಿ ಅವರ ಸಮ್ಮುಖದಲ್ಲಿ ಮಾಧ್ಯಮಗಳಿಗೆ ವಿವರಿಸಿದರು.

‘ಚೀನಾದ ವೀಸಾ ನೀತಿ ಮತ್ತು ಉಭಯ ರಾಷ್ಟ್ರಗಳ ನದಿ ವಿವಾದಗಳ ಬಗ್ಗೆಯೂ ಪ್ರಸ್ತಾಪಿಸಿದ್ದೇನೆ. ಈ ವಿವಾ­ದ­ಗಳನ್ನು ಬೇಗನೆ ಬಗೆಹರಿಸಿಕೊಂಡರೆ ಉಭಯ ರಾಷ್ಟ್ರಗಳ ಪರಸ್ಪರ ನಂಬಿ­ಕೆಯು ಹೊಸ ಎತ್ತರಕ್ಕೆ ಏರುತ್ತದೆ’ ಎಂದು ಮೋದಿ ಅವರು ಹೇಳಿದರು.

‘ನಾಗರಿಕ ಪರಮಾಣು ಶಕ್ತಿ ಕ್ಷೇತ್ರದಲ್ಲಿ ಪರಸ್ಪರ ಸಹಕಾರದ ಬಗ್ಗೆ ಚರ್ಚೆ ಪ್ರಕ್ರಿಯೆಗೆ ಚಾಲನೆ ನೀಡ­ಲಾ­ಗು­ವುದು. ಇದರಿಂದ ಇಂಧನ

ಅತಿಕ್ರಮಣಕಾರರಿಗೆ ಢೋಕ್ಲಾ
ಗಡಿಯಲ್ಲಿ ನಮ್ಮ ಯೋಧರು ಚೀನಾ ಸೈನಿ­ಕರ ಗುಂಡೇಟಿನಿಂದ ಗಾಯ­ಗೊಂಡು ರಕ್ತ ಸುರಿಸುತ್ತಿ­ರುವಾಗ ಇತ್ತ ಪ್ರಧಾನಿ ನರೇಂದ್ರ ಮೋದಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರಿಗೆ ‘ಢೋಕ್ಲಾ’ ಉಣಬಡಿಸುತ್ತಿ­ದ್ದಾರೆ. ಭಾರತದ ನೆಲದ ಮೇಲೆ ಚೀನಾದ ಅತಿಕ್ರಮಣ ಮುಂದು­ವರಿದಿದ್ದರೂ ಆ ದೇಶದ ಅಧ್ಯಕ್ಷರಿಗೆ ರಾಜ ಮರ್ಯಾದೆ ನಡೆಯುತ್ತಿದೆ. ಎಂಥ ವಿಪರ್ಯಾಸ! 56 ಇಂಚಿನ ಅಗಲದ ಮೋದಿ ಅವರ ಎದೆ 56 ಮಿಲಿ ಮೀಟರ್‌ಗೆ ಇಳಿದಿದೆ.
– ಕಾಂಗ್ರೆಸ್‌
(ಪಾಕ್‌ ಪ್ರಧಾನಿಗೆ ಬಿರಿಯಾನಿ ನೀಡಿದ ಯುಪಿಎ ಬಗ್ಗೆ ಬಿಜೆಪಿ ಮಾಡಿದ್ದ ಟೀಕೆಗೆ  ತಿರುಗೇಟು)

ಭದ್ರತೆಗೆ ಸಂಬಂಧಿಸಿದಂತೆ ಸಹಕಾರದ ವ್ಯಾಪ್ತಿ ಹಿಗ್ಗಲಿದೆ. ಮಾರುಕಟ್ಟೆ ಪ್ರವೇಶ ಸುಧಾ­ರಣೆ ಮತ್ತು ಚೀನಾದಲ್ಲಿ ಭಾರತದ ಕಂಪೆನಿ­ಗಳಿಗೆ ಹೂಡಿಕೆಗೆ ಅವಕಾಶ ಕಲ್ಪಿ­ಸು­ವಲ್ಲಿ ಸಹಭಾಗಿತ್ವವನ್ನು ಕೋರಿ­ದ್ದೇನೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಕ್ಸಿ ಭರವಸೆ ನೀಡಿ­ದ್ದಾರೆ. ಭಾರತದ ಮೂಲ­ಸೌಕರ್ಯ ಮತ್ತು ತಯಾರಿಕಾ ಕ್ಷೇತ್ರ­ಗ­ಳಲ್ಲಿ ಚೀನಾದ ಹೂಡಿಕೆಗೆ ಆಹ್ವಾನ ನೀಡ­ಲಾಗಿದೆ’ ಎಂದು ಪ್ರಧಾನಿ ತಿಳಿಸಿದರು.

ಕ್ಸಿ ಪ್ರತಿಕ್ರಿಯೆ: ನರೇಂದ್ರ ಮೋದಿ ಅವರ ಪ್ರಸ್ತಾಪಗಳಿಗೆ ಪ್ರತಿಕ್ರಿಯಿಸಿದ ಕ್ಸಿ ಅವರು, ‘ಇನ್ನೂ ವಾಸ್ತವ ಗಡಿ ರೇಖೆಯನ್ನು ಗುರುತಿಸಬೇಕಿರುವುದರಿಂದ ಕೆಲವೊಮ್ಮೆ ಅತಿಕ್ರಮಣದಂತಹ ಘಟನೆಗಳು ನಡೆಯುತ್ತವೆ. ಆದರೆ ಇಂತಹ ಪ್ರಮಾದಗಳನ್ನು ಬೆಳೆಯಲು ಬಿಡದೆ ಪರಿಹಾರ ಕಂಡುಕೊಳ್ಳುವುದಕ್ಕೆ ಎರಡೂ ರಾಷ್ಟ್ರಗಳು ಸಮರ್ಥವಾಗಿವೆ’ ಎಂದರು.

ಭಾರತದೊಂದಿಗಿನ ಗಡಿ ವಿವಾದದ ವಿಷಯವನ್ನು ಸ್ನೇಹಯುತವಾಗಿಯೇ ಬಗೆಹರಿಸಿಕೊಳ್ಳಬೇಕು ಎಂಬುದು ಚೀನಾದ ದೃಢ ನಿಶ್ಚಯವಾಗಿದೆ ಎಂದೂ ಕ್ಸಿ ಹೇಳಿದರು.

ಮಾನಸ ಸರೋವರಕ್ಕೆ ಹೊಸ ಮಾರ್ಗ

ಟಿಬೆಟ್‌ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳಲು ಸಿಕ್ಕಿಂ– ಟಿಬೆಟ್ ಗಡಿಯಲ್ಲಿರುವ ನಾಥುಲಾ ಪಾಸ್‌ ಮುಕ್ತಗೊಳಿಸುವ ಒಪ್ಪಂದಕ್ಕೆ ಚೀನಾ ಸಹಿ ಹಾಕಿದೆ.

ಸದ್ಯ ಉತ್ತರಾಖಂಡದ ದುರ್ಗಮ ಹಾದಿಯ ಮೂಲಕ  ಮಾನಸ ಸರೋವರ ಯಾತ್ರೆ ಕೈಗೊಳ್ಳಲಾಗುತ್ತಿದೆ. ನಾಥುಲಾ ಪಾಸ್‌ ಮುಕ್ತವಾದರೆ ದ್ವಿಚಕ್ರ ವಾಹನದ ಮೂಲಕವೂ ಮಾನಸ ಸರೋವರಕ್ಕೆ ಪ್ರಯಾಣ ಕೈಗೊಳ್ಳ­ಬಹುದು.  ಇದರಿಂದ ವೃದ್ಧ ಯಾತ್ರಿ­ಗಳಿಗೆ ಸಾಕಷ್ಟು ಅನುಕೂಲ­ವಾಗುತ್ತದೆ.

₨ 1.20 ಲಕ್ಷ ಕೋಟಿ ಚೀನಾ ಹೂಡಿಕೆ
ಭಾರತದಲ್ಲಿ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಸುಮಾರು ೧.೨೦ ಲಕ್ಷ ಕೋಟಿ ರೂಪಾಯಿಗಳನ್ನು ಹೂಡುವುದಾಗಿ ಚೀನಾ ಪ್ರಕಟಿಸಿದೆ. ಈ ಮೊತ್ತವು ಜಪಾನ್‌ ಭಾರತದಲ್ಲಿ ಹೂಡಿಕೆ ಮಾಡಲು ಮುಂದಾಗಿ­ರುವುದಕ್ಕಿಂತ ಕಡಿಮೆ. ಮೋದಿ ಅವರು ಇತ್ತೀಚೆಗೆ ಜಪಾನ್‌ಗೆ ಭೇಟಿ ನೀಡಿದ್ದಾಗ, ಭಾರತದಲ್ಲಿ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಸುಮಾರು ೨.೧೦ ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಅಲ್ಲಿನ ಪ್ರಧಾನಿ ಪ್ರಕಟಿಸಿದ್ದರು.

ಉಭಯ ರಾಷ್ಟ್ರಗಳು ಬಾಂಧವ್ಯ ಬಲಪಡಿಸಿಕೊಳ್ಳಲು ಹೇಗೆ ಉತ್ಸುಕವಾಗಿವೆಯೋ ಅದೇ ರೀತಿಯ ಉತ್ಸಾಹವನ್ನು ವಿವಾದಗಳನ್ನು ಬಗೆಹರಿಸಿ­ಕೊಳ್ಳುವುದಕ್ಕೂ ತೋರಬೇಕಾ­ಗಿದೆ ಎಂದರು.

ನಿರ್ಧಾರಗಳು: ಕಡಲುಗಳ್ಳರ ನಿಗ್ರಹ, ಸಮುದ್ರದಲ್ಲಿ ನೌಕೆಗಳ ಮುಕ್ತ ಸಂಚಾರ, ಎರಡೂ ರಾಷ್ಟ್ರಗಳ ಸಾಗರ ಭದ್ರತಾ ಸಂಸ್ಥೆಗಳ ನಡುವೆ ಹೆಚ್ಚಿನ ಸಹಕಾರಕ್ಕೆ ಸಂಬಂಧಿಸಿದಂತೆ ಈ ವರ್ಷದೊಳಗೆ ಮಾತುಕತೆ ನಡೆಸಲು ಉಭಯ ನಾಯಕರ ಸಭೆಯಲ್ಲಿ ನಿರ್ಧರಿಸಲಾಯಿತು.

ಮುಂಬೈ– ಶಾಂಘೈ ಮತ್ತು ಅಹಮದಾಬಾದ್‌– ಗ್ವಾಂಗ್‌ಝು ನಗರಗಳನ್ನು ‘ಸೋದರ ನಗರ’ಗಳಾಗಿ ಅಭಿವೃದ್ಧಿಪಡಿಸುವ ಬಗ್ಗೆಯೂ ಪ್ರಸ್ತಾಪಿಸಲಾಯಿತು. ಚೀನಾದಲ್ಲಿ ೨೦೧೫ನೇ ಇಸವಿಯನ್ನು ‘ಭಾರತಕ್ಕೆ ಭೇಟಿ ನೀಡಿ ವರ್ಷ’ವನ್ನಾಗಿ ಆಚರಿಸಲು ಹಾಗೂ ಭಾರತದಲ್ಲಿ ೨೦೧೬ನೇ ಇಸವಿಯನ್ನು ‘ಚೀನಾಕ್ಕೆ ಭೇಟಿ ನೀಡಿ ವರ್ಷ’ವನ್ನಾಗಿ ಆಚರಿಸುವ ನಿರ್ಧಾರ ಹೊರಹೊಮ್ಮಿತು.

ಇಬ್ಬರೂ ನಾಯಕರು ಪ್ರಾದೇಶಿಕ ಸಂಪರ್ಕ ಜಾಲವನ್ನು ಬಲಪಡಿಸುವ ಕುರಿತು ಹಾಗೂ ಭಾರತ, ಚೀನಾ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ ಆರ್ಥಿಕ ದಿಕ್ಪಥವನ್ನು ಸ್ಥಾಪಿಸುವ ಪ್ರಸ್ತಾವದ ಕುರಿತು ಚರ್ಚಿಸಿದರು. ಕ್ಸಿ ಅವರು ಈ ಮಾತುಕತೆ ವೇಳೆ ಶಾಂಘೈ ಸಹಕಾರ ಸಂಸ್ಥೆಯಲ್ಲಿ (ಎಸ್‌ಸಿಒ) ಭಾರತದ ಸದಸ್ಯತ್ವವನ್ನು ಬೆಂಬಲಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT