ಅವರ ಈ ಹೇಳಿಕೆಗೆ ಕಾಂಗ್ರೆಸ್ ಮುಖಂಡರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ವಿದೇಶಿ ನೆಲದಲ್ಲಿ ಮೋದಿ ದೇಶಕ್ಕೆ ಅವಮಾನ ಆಗುವಂತೆ ಮಾತನಾಡಿದ್ದಾರೆ. ಇದು ಭಾರತ ವಿರೋಧಿ ಹೇಳಿಕೆ. ಕೂಡಲೇ ಇದಕ್ಕೆ ಕ್ಷಮೆ ಯಾಚಿಸಬೇಕು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ಆಗ್ರಹಿಸಿದರು. ಮಂಗಳವಾರ ರಾಜ್ಯಸಭೆಯಲ್ಲೂ ಅವರು ಈ ವಿಷಯ ಪ್ರಸ್ತಾಪಿಸಿದರು.
ಮೋದಿ ಬಿಜೆಪಿ ಮುಖಂಡರಾಗಿ ಅಥವಾ ವೈಯಕ್ತಿಕ ಉದ್ದೇಶಕ್ಕೆ ವಿದೇಶ ಪ್ರವಾಸ ಕೈಗೊಂಡಿಲ್ಲ. ಅವರು ದೇಶವನ್ನು ಪ್ರತಿನಿಧಿಸುತ್ತಿದ್ದಾರೆ ಎಂಬುದನ್ನು ಮರೆಯಬಾರದು ಎಂದು ಹೇಳಿದ ಅವರು ಇದನ್ನು ಸಹಿಸಲು ಸಾಧ್ಯವಿಲ್ಲ ಎಂದರು.