ನವದೆಹಲಿ (ಪಿಟಿಐ): ನಿಮ್ಮಂದಿಗೆ ಇತ್ತೀಚೆಗೆ ನಡೆಸಿದ ಸಭೆಯು ನಮಗೆ ತೃಪ್ತಿ ತಂದಿದ್ದು, ಉಭಯ ದೇಶಗಳ ಮಧ್ಯೆ ಬಗೆಹರಿಯದೆ ಉಳಿದಿರುವ ಎಲ್ಲ ವಿಷಯಗಳನ್ನು ಮುಂಬರುವ ದಿನಗಳಲ್ಲಿ ಸಾಮರಸ್ಯದಿಂದ ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ನಿಮ್ಮೊಂದಿಗೆ ಕಾರ್ಯ ನಿರ್ವಹಿಸಲು ಎದುರು ನೋಡುತ್ತಿದ್ದೇನೆ.
- ಇದು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರದ ಸಾರಾಂಶ.
ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಇತರ ಸಾರ್ಕ್ ಮುಖಂಡರೊಂದಿಗೆ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿ ಸ್ವದೇಶಕ್ಕೆ ವಾಪಸ್ಸಾದ ಬಳಿಕ ಷರೀಫ್ ಅವರು ಭಾರತ ಭೇಟಿ ಕುರಿತಂತೆ ಪ್ರಧಾನಿ ಅವರಿಗೆ ಈ ಪತ್ರ ಬರೆದಿದ್ದಾರೆ.
`ಉಭಯ ದೇಶಗಳ ಹಿತಾಸಕ್ತಿಗೆ ಸಂಬಂಧಿಸಿದ ಹಾಗೂ ದ್ವಿಪಕ್ಷೀಯ ವಿಷಯಗಳ ಕುರಿತಂತೆ ನಮ್ಮ ಮಹತ್ವಪೂರ್ಣ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವುದರೊಂದಿಗೆ ನಾನು ಹೆಚ್ಚು ತೃಪ್ತಿಯಿಂದ ವಾಪಸ್ಸಾಗಿರುವೆ ಎನ್ನುವುದನ್ನು ನಾನು ತಿಳಿಸಲೇ ಬೇಕು' ಎಂದು ಷರೀಫ್ ಪತ್ರದಲ್ಲಿ ಬರೆದಿದ್ದಾರೆ.
`ಉಭಯ ದೇಶಗಳ ನಡುವೆ ಸಾಮರಸ್ಯದಿಂದ ಬಗೆಹರಿಯದೆ ಕಗ್ಗಂಟಾಗಿ ಉಳಿದಿರುವ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಿಮ್ಮಂದಿಗೆ ಕಾರ್ಯನಿರ್ವಹಿಸಲು ನಾನು ಎದುರು ನೋಡುತ್ತಿದ್ದೇನೆ. ಭವಿಷ್ಯದ ಈ ಅಡಿಪಾಯವನ್ನು ಹೆಚ್ಚು ಅರ್ಥಪೂರ್ಣವಾಗಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮುಂದುವರಿಯಲಿ ಎಂದು ಆಶಿಸುತ್ತೇನೆ' ಎಂದು ಷರೀಫ್ ಪತ್ರದಲ್ಲಿ ತಿಳಿಸಿದ್ದಾರೆ.