ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಯುಗಾರಂಭ

ಸಂಪುಟದಲ್ಲಿ ರಾಜ್ಯದ ಡಿ.ವಿ.ಸದಾನಂದ ಗೌಡ, ಅನಂತಕುಮಾರ್‌, ಜಿ.ಎಂ.ಸಿದ್ದೇಶ್ವರಗೆ ಸ್ಥಾನ
Last Updated 26 ಮೇ 2014, 20:26 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಾಷ್ಟ್ರಪತಿ ಭವ­ನದ ಮುಂದಿನ ವಿಶಾಲ ಪ್ರಾಂಗಣದಲ್ಲಿ ಸೋಮ­ವಾರ ಸಂಜೆ ನಡೆದ ಭವ್ಯ ಸಮಾ­ರಂಭದಲ್ಲಿ ನರೇಂದ್ರ ದಾಮೋದರ­ದಾಸ್‌ ಮೋದಿ ಅವರು ದೇಶದ 15ನೇ ಪ್ರಧಾನಿಯಾಗಿ ಪ್ರಮಾಣ­ವಚನ ಸ್ವೀಕರಿಸಿ­ದರು.

ರಾಜಕೀಯ ನಾಯಕರು, ಉದ್ಯಮಿ­ಗಳು, ಧಾರ್ಮಿಕ ಮುಖಂಡರು, ಖ್ಯಾತ­ನಾಮರು ಹಾಗೂ ಸಾರ್ಕ್‌ ರಾಷ್ಟ್ರಗಳ ಮುಖ್ಯಸ್ಥರು ಸೇರಿದಂತೆ ಸುಮಾರು 4,000 ಗಣ್ಯರು ಈ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾದರು.

ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಮೋದಿ ಹಾಗೂ ಅವರ ಸಂಪುಟದ 45 ಸದಸ್ಯರಿಗೆ  ಗೋಪ್ಯ­ತೆಯ ಪ್ರಮಾಣವಚನ ಬೋಧಿಸಿದರು.

ಎಲ್ಲೆಡೆ ಸಂಭ್ರಮ: ಮೋದಿ ಅವರು  ದೇವರ ಹೆಸರಿ­ನಲ್ಲಿ, ಹಿಂದಿಯಲ್ಲಿ ಪ್ರಮಾ­ಣವಚನ ಸ್ವೀಕರಿಸು­ತ್ತಿದ್ದಂತೆಯೇ,   ದೇಶದಾದ್ಯಂತ ಅಭಿಮಾನಿ­ಗಳು ಹಾಗೂ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಪಟ್ಟರು.

ಅಕ್ಷರಶಃ ಪಟ್ಟಾಭಿಷೇಕ ನೆನಪಿ­ಸಿದ ಈ ಸಮಾರಂಭದಲ್ಲಿ ಜಾತ್ರೆಯ ಸಂಭ್ರಮ ನೆಲೆಸಿತ್ತು. ನೆತ್ತಿಸುಡುವ ಬಿಸಿಲನ್ನೂ ಲೆಕ್ಕಿಸದೇ ಮೋದಿ ಅಭಿಮಾನಿಗಳು ಮಧ್ಯಾಹ್ನವೇ ರಾಷ್ಟ್ರಪತಿಭವನ­ದತ್ತ ಧಾವಿಸಿ ಬಂದರು. ಪ್ರಾಂಗಣದಲ್ಲಿ ಅಲ್ಲಲ್ಲಿ ಫ್ಯಾನ್‌ ಗಾಳಿ ಬೀಸುತ್ತಿದ್ದರೂ ಧಗೆ ತಾಳಲಾರದೇ ಹಲವರು ಆಹ್ವಾನ ಪತ್ರಿಕೆಯನ್ನೇ ಬೀಸಣಿಕೆ ಮಾಡಿ­ಕೊಂಡಿದ್ದರು.

ಜಯಘೋಷ: ತುಂಬು ತೋಳಿನ, ಕೆನೆಬಣ್ಣದ ಜುಬ್ಬಾದ ಮೇಲೆ  ತಿಳಿಕಂದು ವರ್ಣದ ನೆಹರೂ ಜಾಕೆಟ್‌ ಧರಿಸಿದ್ದ ನರೇಂದ್ರ ಮೋದಿ ಅವರು ವೇದಿಕೆಗೆ ಬರುತ್ತಿ­ದ್ದಂತೆಯೇ ‘ಮೋದಿ...ಮೋದಿ...’ ಎಂಬ ಕೂಗು ಕೇಳಿ­ಬಂತು.  ಇನ್ನೊಂದೆಡೆ, ‘ಭಾರತ್‌್ ಮಾತಾ ಕಿ ಜೈ’, ‘ಜೈ ಶ್ರೀರಾಮ್‌’ ಎಂಬ ಘೋಷಣೆಗಳು ಮೊಳಗಿದವು.

ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್‌,  ನೇಪಾಳ ಪ್ರಧಾನಿ ಸುಶೀಲ್‌ ಕೊಯಿರಾಲ, ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಮತ್ತಿತರರು

ಮುಂದಿನ ಸಾಲಿ­ನಲ್ಲಿಯೇ ಕೂತಿದ್ದರು. ಒಂದೊಂದಾಗಿ ಇವರೆಲ್ಲರ ಹೆಸರನ್ನು ಕರೆದು ಸ್ವಾಗತ ಕೋರುತ್ತಿದ್ದಂತೆಯೇ ಹರ್ಷೋದ್ಗಾರ ಕೇಳಿಬರುತ್ತಿತ್ತು. ಷರೀಫ್‌ ಹೆಸರು ಕರೆದಾಗಲಂತೂ ಜನರ ಕೇಕೆ ಮುಗಿಲು ಮುಟ್ಟಿತ್ತು.ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ   ಹೆಸರು ಕರೆದಾಗ ಕೂಡ ಅಭಿಮಾನಿ­ಗಳಿಂದ ಜಯಘೋಷ ಕೇಳಿಬಂತು.

ಗಣ್ಯರು: ಆಫ್ಘಾನಿ­ಸ್ತಾನದ  ಅಧ್ಯಕ್ಷ ಹಮೀದ್‌ ಕರ್ಜೈ, ಭೂತಾನ್‌ ಪ್ರಧಾನಿ ತ್ಸರಿಂಗ್‌ ತೊಗ್‌ಬೆ, ಮಾಲ್ಡೀವ್ಸ್‌ ಅಧ್ಯಕ್ಷ ಅಬ್ದುಲ್ಲಾ ಯಮೀನ್‌ ಅಬ್ದುಲ್‌ ಗಯೂಮ್‌, ಬಾಂಗ್ಲಾದೇಶ ಸ್ಪೀಕರ್‌ ಶಿರಿನ್‌ ಚೌಧರಿ, ಮಾರಿಷನ್‌ ಪ್ರಧಾನಿ ನವೀನ್‌ ರಾಮ್‌ಗೂಲಮ್‌ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್‌­ತಾಜ್‌ ಅಜೀಜ್‌, ವಿಶೇಷ ಸಹಾಯಕ ತಾರಿಕ್‌ ಫಾತೆಮಿ, ವಿದೇಶಾಂಗ ಕಾರ್ಯ­ದರ್ಶಿ ಏಜಾಜ್‌ ಚೌಧರಿ ಮತ್ತಿತರರು ಷರೀಫ್‌ ಅವರ ನಿಯೋಗದಲ್ಲಿದ್ದರು.

ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ದರ್ಬಾರ್‌ ಸಭಾಂಗಣದ ಮೆಟ್ಟಿಲು­ಗಳನ್ನು ಇಳಿದು, ಪ್ರಾಂಗಣ­ದಲ್ಲಿ ನಿರ್ಮಿಸಿದ್ದ ವೇದಿಕೆ ಹತ್ತುವುದಕ್ಕೆ ಕೆಲ ಸಮಯ ತೆಗೆದುಕೊಂಡ ಕಾರಣ ಕಾರ್ಯ­­ಕ್ರಮ ಕೆಲವು ನಿಮಿಷ ತಡವಾಗಿ ಶುರುವಾಯಿತು.

ಉಪಸ್ಥಿತ ಗಣ್ಯರು: ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ, ನಿರ್ಗಮಿತ ಪ್ರಧಾನಿ ಮನಮೋಹನ್‌ ಸಿಂಗ್‌, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್‌ ಉಪಾ­ಧ್ಯಕ್ಷ ರಾಹುಲ್‌ ಗಾಂಧಿ, ಪಿ.ಚಿದಂಬರಂ, ಶರದ್‌ ಪವಾರ್, ಪ್ರಫುಲ್‌ ಪಟೇಲ್‌, ಬಿಜೆಪಿ ಹಿರಿಯ ಮುಖಂಡರಾದ ಎಲ್‌.ಕೆ.­ಅಡ್ವಾಣಿ, ಮುರಳಿ ಮನೋ­ಹರ್‌ ಜೋಷಿ, ನಿರ್ಗಮಿತ ಸ್ಪೀಕರ್‌ ಮೀರಾ ಕುಮಾರ್‌, ಮಾಜಿ ರಾಷ್ಟ್ರಪತಿ­ಗಳಾದ ಅಬ್ದುಲ್‌್ ಕಲಾಂ, ಪ್ರತಿಭಾ ಪಾಟೀಲ್‌ ಉಪಸ್ಥಿತರಿದ್ದರು.

ಮುಲಾಯಂ ಸಿಂಗ್‌ ಯಾದವ್‌, ಅವರ ಪುತ್ರ ಅಖಿಲೇಶ್‌ ಯಾದವ್‌, ಜಮ್ಮು–ಕಾಶ್ಮೀರ ಮುಖ್ಯ­ಮಂತ್ರಿ ಒಮರ್‌ ಅಬ್ದುಲ್ಲಾ, ಬಿಹಾರ ಮುಖ್ಯ­ಮಂತ್ರಿ ಜೀತನ ರಾಂ ಮಾಂಝಿ, ಅಸ್ಸಾಂ ಮುಖ್ಯಮಂತ್ರಿ ತರುಣ್‌್ ಗೊಗೊಯ್‌, ಹರಿಯಾಣ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ಹೂಡಾ ಕೂಡ ಇದ್ದರು.

ತಾರಾ ಮೆರುಗು: ಬಾಲಿವುಡ್‌ ನಟರಾದ ಸಲ್ಮಾನ್‌ ಖಾನ್‌, ವಿವೇಕ್‌ ಒಬೆ­ರಾಯ್‌, ಹೇಮಾ ಮಾಲಿನಿ,  ಧರ್ಮೇಂದ್ರ, ಶತ್ರುಘ್ನ ಸಿನ್ಹಾ ಮತ್ತಿತರರು ಕಾರ್ಯ­ಕ್ರಮಕ್ಕೆ ತಾರಾ ಮೆರುಗು ನೀಡಿದ್ದರು.

ಧಾರ್ಮಿಕ ಮುಖಂಡರು:  ಶ್ರೀ ಶ್ರೀ ರವಿಶಂಕರ್‌ ಗುರೂಜಿ, ಪೇಜಾವರ ಶ್ರೀ, ಮೊರಾರಿ ಬಾಪು, ಸಾಧ್ವಿ ರಿತಾಂಬರಾ ಮುಂದಿನ ಸಾಲಿನಲ್ಲಿ ಕೂತಿದ್ದರು.90 ನಿಮಿಷಗಳವರೆಗೆ ನಡೆದ ಸಮಾರಂಭದ ಬಳಿಕ ಮೋದಿ ಅವರು  ವಿದೇಶಿ ಗಣ್ಯರಿಗೆ ಹಸ್ತಲಾಘವ ನೀಡಿ ಧನ್ಯವಾದ ಸಲ್ಲಿಸಿದರು. ನೂತನ ಪ್ರಧಾನಿಗೆ ಶುಭಕೋರು­ವುದಕ್ಕೆ ಜನ ಮುಗಿಬಿದ್ದ ಕಾರಣ ತುಸು ಹೊತ್ತು ಗದ್ದಲ ಉಂಟಾಯಿತು.

ಪರ್ಯಾಯ ವ್ಯವಸ್ಥೆ: ಮಳೆ ಬೀಳುವ  ಮುನ್ಸೂಚನೆ ಇದ್ದ ಕಾರಣ ರಾಷ್ಟ್ರಪತಿ ಭವನದ ದರ್ಬಾರ್‌ ಸಭಾಂಗಣದಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅದರ ಅಗತ್ಯ ಬೀಳಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT