ಕೊಪ್ಪಳ: ಸುದ್ದಿ ವಾಹಿನಿಗೆ ಬೈಟ್ ಕೊಟ್ಟ ವಿದ್ಯಾರ್ಥಿ ಯಲ್ಲಾಲಿಂಗನ ಕೊಲೆ ಪ್ರಕರಣವು ಜಿಲ್ಲೆಯಲ್ಲಿ ಕಾವು ಹೆಚ್ಚಿಸಿ, ಇದೀಗ ರಾಜಕೀಯ ಬಣ್ಣ ಪಡೆದುಕೊಂಡಿದೆ. ಈ ಪ್ರಕರಣವನ್ನು ದಾಳವಾಗಿ ಬಳಸಿಕೊಂಡು ಕಾಂಗ್ರೆಸ್– ಬಿಜೆಪಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. ಕಾಂಗ್ರೆಸ್ನಲ್ಲಿಯೇ ಆಂತರಿಕ ಕಲಹದ ಕಿಡಿಯೂ ಹೊತ್ತಿಕೊಂಡಿದೆ.
ಒಂದೆಡೆ ಬಿಜೆಪಿ ದಂಡು ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮೇಲೆ ಮುಗಿಬಿದ್ದರೆ, ಇನ್ನೊಂದೆಡೆ ಆರೋಪಿಯ ತಂದೆ ಹನುಮೇಶ ನಾಯಕ ತನಿಖಾ ತಂಡದ ಮೇಲೆ ಶಂಕೆ ವ್ಯಕ್ತಪಡಿಸಿ, ‘ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಅವರು ಒತ್ತಡ ಹೇರಿ ತಮ್ಮ ಕ್ಷೇತ್ರದ ಪೊಲೀಸ್ ಅಧಿಕಾರಿಗಳನ್ನು ತನಿಖಾ ತಂಡದ ನೇತೃತ್ವ ವಹಿಸುವಂತೆ ಮಾಡಿದ್ದಾರೆ.
ಇದು ಶಿವರಾಜ ತಂಗಡಗಿಯವರನ್ನು ಹಣಿಯುವ ತಂತ್ರ’ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇದು ಕಾಂಗ್ರೆಸ್ನೊಳಗಿನ ಕಿಡಿಯನ್ನು ಇನ್ನಷ್ಟು ಹೆಚ್ಚಿಸಿದೆ. ಆದರೆ, ಪೊಲೀಸರು ಮಾತ್ರ ಕಾನೂನು ಪ್ರಕ್ರಿಯೆಯನ್ನು, ವಿವಿಧ ಸಂಘಟನೆಗಳು ಹೋರಾಟವನ್ನು ಮುಂದುವರೆಸಿವೆ.