ಉಡುಪಿ: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಜನಾರ್ದನ ತೋನ್ಸೆ ಬುಧವಾರ ಅಧಿಕಾರ ಸ್ವೀಕರಿಸಿದರು. ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಸ್ವಚ್ಛ, ದಕ್ಷ ಹಾಗೂ ಪ್ರಮಾ ಣಿಕತೆಯಿಂದ ಕರ್ತವ್ಯ ನಿರ್ವಹಿಸು ವುದರ ಜತೆಗೆ ಭ್ರಷ್ಟಾಚಾರ ಮುಕ್ತ ವಾದ ಆಡಳಿತವನ್ನು ನೀಡಲು ಶ್ರಮಿಸು ತ್ತೇನೆ. ಬಡವರು, ಕೆಳವರ್ಗದ ಜನರ ಆಶೋತ್ತರಗಳನ್ನು ಈಡೇರಿಸಲು ಬದ್ಧನಾಗಿದ್ದೇನೆ ಎಂದರು.
ಸಮಿತಿಯ ಸಲಹೆ ಸೂಚನೆಗಳನ್ನು ಪಡೆದು ನಿವೇಶನ ಮಂಜೂರು ಮಾಡಲು ಮೊದಲ ಆದ್ಯತೆಯನ್ನು ನೀಡಲಾಗುವುದು. ಅಕ್ರಮ ಸಕ್ರಮ ಹಾಗೂ ಸಿಂಗಲ್ ಲೇಔಟ್ (ಏಕ ವಿನ್ಯಾ ಸ)ನ ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹ ರಿಸಲು ಕ್ರಮಕೈಗೊಳ್ಳುತ್ತೇನೆ ಎಂದರು.
ಶಾಸಕ ಪ್ರಮೋದ್ ಮಧ್ವರಾಜ್ ಮಾತನಾಡಿ, ಬಡವರ ಸಮಸ್ಯೆಗಳನ್ನು ನಿವಾರಿಸುವುದರೊಂದಿಗೆ ಭ್ರಷ್ಟಾಚಾರ ರಹಿತ ಕಚೇರಿಯನ್ನಾಗಿ ಮಾಡಬೇಕು. ಉಡುಪಿಯ ಅಭಿವೃದ್ಧಿಗೆ ಪೂರಕವಾದ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.
23ರಿಂದ ಅಕ್ರಮ ಸಕ್ರಮ ಕಾನೂನು ಜಾರಿಗೆ ಬರುತ್ತದೆ. ಬಾಕಿ ಇರುವ ಅರ್ಜಿಗಳನ್ನು ಒಂದು ವರ್ಷದೊಳಗೆ ವಿಲೇವಾರಿ ಮಾಡಬೇಕು. ಹಾಗೆಯೇ ಒಂದು ವರ್ಷದ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವುದರಿಂದ ಹೆಚ್ಚುವರಿಯಾಗಿ ಬರುವ ಅರ್ಜಿಗಳನ್ನು ಹತ್ತು ದಿನಗಳಿಗೊಮ್ಮೆ ಇತ್ಯರ್ಥ ಪಡಿಸುವ ವ್ಯವಸ್ಥೆಯಾಗಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುನೀತಾ ನಾಯ್ಕ್, ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷೆ ವೆರೋನಿಕ ಕರ್ನೇಲಿಯೊ, ನಗರಸಭೆಯ ಅಧ್ಯಕ್ಷ ಪಿ. ಯುವರಾಜ, ಉಪಾಧ್ಯಕ್ಷೆ ಅಮೃತಾ ಕೃಷ್ಣಮೂರ್ತಿ, ಪೌರಾಯುಕ್ತ ಡಿ. ಮಂಜುನಾಥಯ್ಯ, ಸದಸ್ಯರಾದ ರಮೇಶ್ ಕಾಂಚನ್, ಪ್ರಶಾಂತ್ ಅಮೀನ್, ಕಿಶನ್ ಕುಮಾರ್ ಕೊಳ್ಕೆಬೈಲ್, ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಸರಸು ಡಿ. ಬಂಗೇರ ಉಪಸ್ಥಿತರಿದ್ದರು.