ನವದೆಹಲಿ (ಪಿಟಿಐ): ಯೋಜನೆಗಳ ಅನುಷ್ಠಾನಕ್ಕಾಗಿ ಬಂಡವಾಳ ಕ್ರೋಡೀಕರಣ ಮಾಡಲು ರೈಲ್ವೆ ಹಣಕಾಸು ನಿಗಮ (ಐಆರ್ ಎಫ್ಸಿ) ಮತ್ತು ರೈಲ್ ವಿಕಾಸ್ ನಿಗಮ ನಿಯಮಿತಗಳ (ಆರ್ವಿಎನ್ಎಲ್) ಮೂಲಕ 2014–15ನೇ ಸಾಲಿನಲ್ಲಿ ₨11,790 ಕೋಟಿಗಳಷ್ಟು ಸಾಲ ಎತ್ತುವ ಉದ್ದೇಶ ಇದೆ ಎಂದು ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ಮಧ್ಯಾಂತರ ಬಜೆಟ್ನಲ್ಲಿ ಈ ಉದ್ದೇಶಕ್ಕಾಗಿ ₨13,800 ಕೋಟಿ ಸಾಲ ಎತ್ತುವ ಗುರಿ ಪ್ರಕಟಿಸಲಾಗಿತ್ತು. ಮಂಗಳವಾರ ಲೋಕಸಭೆಯಲ್ಲಿ ಮಂಡನೆಯಾದ ಬಜೆಟ್ನಲ್ಲಿ ಈ ಮೊತ್ತ ₨2010 ಕೋಟಿಗಳಷ್ಟು ಕಡಿಮೆಯಾಗಿದೆ.
ಐಆರ್ಎಫ್ಸಿಯಿಂದ ₨11,500 ಕೋಟಿ ಮತ್ತು ಆರ್ವಿಎನ್ಎಲ್ ಮೂಲಕ ₨290 ಕೋಟಿ ಒಟ್ಟು ₨11,790 ಕೋಟಿ ಸಾಲ ಎತ್ತುವ ಗುರಿ ಇದೆ ಎಂದ ರೈಲ್ವೆ ಸಚಿವರು, ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವ (ಪಿಪಿಪಿ) ಮೂಲಕ ಸಂಪನ್ಮೂಲ ಸಂಗ್ರಹಿಸುವ ಪ್ರಸ್ತಾವ ಮಧ್ಯಂತರ ಬಜೆಟ್ನಲ್ಲಿಇರುವಂತೆಯೇ (₨6,005 ಕೋಟಿ) ಇರುತ್ತದೆ ಎಂದು ಹೇಳಿದ್ದಾರೆ.
2013–14ನೇ ಸಾಲಿನಲ್ಲಿ ಐಆರ್ಎಫ್ಸಿ ಮೂಲಕ ₨14,688 ಕೋಟಿ ಮತ್ತು ಆರ್ವಿಎನ್ಎಲ್ ಮೂಲಕ ₨254 ಕೋಟಿ ಸಾಲ ಎತ್ತುವಳಿ ಮಾಡಲಾಗಿತ್ತು. ಪ್ರಯಾಣಿಕರ ರೈಲು ಮತ್ತು ಸರಕು ಸಾಗಣೆಯಿಂದ ಸಂಗ್ರಹವಾಗುವ ವರಮಾನವು ಹೆಚ್ಚಿನ ಪ್ರಮಾಣದಲ್ಲಿ ಇಂಧನ, ವೇತನ, ಪಿಂಚಣಿ, ಹಳಿ ಮತ್ತು ಬೋಗಿಗಳ ನಿರ್ವಹಣೆ, ಸುರಕ್ಷತಾ ಕ್ರಮಗಳಿಗೆ ವೆಚ್ಚವಾಗುತ್ತದೆ.