ನವದೆಹಲಿ: ಹಿಂದಿನ ಸರ್ಕಾರದ ಯೋಜನೆಗಳನ್ನು ಪುನರ್ ನಾಮಕರಣ ಮಾಡುವ ಕೆಲಸಕ್ಕೆ ಕೈ ಹಾಕಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಸಂಪುಟ ಸಹೋದ್ಯೋಗಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಯಾವುದೇ ಯೋಜನೆಗಳ ಹೆಸರನ್ನು ಪುನರ್ ನಾಮಕರಣ ಮಾಡಿ ಸಮಯ ವ್ಯರ್ಥ ಮಾಡುವುದು ಬೇಡ. ಬದಲಾಗಿ ಆಡಳಿತ ಚುರುಕುಗೊಳಿಸುವ ಕಡೆ ಗಮನ ಕೊಡಿ ಎಂದಿದ್ದಾರೆ.
ಹೈದರಾಬಾದ್ ವಿಮಾನ ನಿಲ್ದಾಣದ ಹೆಸರು ಬದಲಾವಣೆ ಮಾಡುವ ಇಚ್ಛೆಯನ್ನು ವಿಮಾನಯಾನ ಸಚಿವ ಗಜಪತಿರಾಜು ವ್ಯಕ್ತಪಡಿಸಿದ್ದರು. ಹಾಗೆಯೇ ಜವಾಹರಲಾಲ್ ನೆಹರೂ ನಗರ ಪುನರ್ನವೀಕರಣ ಯೋಜನೆ (ಜೆ–ನರ್ಮ್) ಹೆಸರು ಬದಲಾವಣೆ ಮಾಡುವ ಇಂಗಿತವನ್ನು ನಗರಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ನೀಡಿದ್ದರು.
‘ಯೋಜನೆಗಳ ಹೆಸರು ಬದಲಾಯಿಸುವ ಕೆಲಸಕ್ಕೆ ಕೈ ಹಾಕಬೇಡಿ. ಈ ಕೆಲಸಗಳನ್ನು ಮಾಡುತ್ತಾ ಹೋದರೆ ಕೊನೆಯೇ ಇರುವುದಿಲ್ಲ’ ಎಂದು ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಹೇಳಿದ್ದಾರೆ.
ಮೋದಿ ಆರಂಭದಲ್ಲೇ ಎಲ್ಲ ಸರ್ಕಾರಗಳು ಒಂದಲ್ಲಾ ಒಂದು ಒಳ್ಳೆಯ ಕೆಲಸ ಮಾಡಿರುತ್ತವೆ. ಹಿಂದಿನ ಸರ್ಕಾರದ ಎಲ್ಲಾ ಒಳ್ಳೆಯ ಕೆಲಸಗಳನ್ನು ಉಳಿಸಿಕೊಳ್ಳುವುದಾಗಿ ತಿಳಿಸಿದ್ದರು.