ಕ್ಯೋಟೊ (ಪಿಟಿಐ): ಭಾರತದ ಬುಡಕಟ್ಟು ಜನಾಂಗದವರನ್ನು ಹೆಚ್ಚಾಗಿ ಬಾಧಿಸುವ ರಕ್ತಹೀನತೆಗೆ (ಸಿಕ್ಲ್ ಸೆಲ್ ಅನೀಮಿಯಾ) ಪರಿಣಾಮಕಾರಿ ಚಿಕಿತ್ಸೆ ಕಂಡುಹಿಡಿಯುವ ದಿಸೆಯಲ್ಲಿ ಸಹಕಾರ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಜ್ಞರೊಂದಿಗೆ ಮಾತುಕತೆ ನಡೆಸಿದರು.
ಮೋದಿ ಅವರು ಈ ಕುರಿತು ವೈದ್ಯಕೀಯ ನೊಬೆಲ್ ಪುರಸ್ಕೃತ ಹಾಗೂ ಕ್ಯೋಟೊ ವಿಶ್ವವಿದ್ಯಾಲಯದ ನಿರ್ದೇಶಕ ಎಸ್.ಯಮನಾಕ ಅವರೊಂದಿಗೆ ಚರ್ಚಿಸಿದರು. ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದ ಕಾಲದಿಂದಲೂ ಈ ಕಾಯಿಲೆಗೆ ಪರಿಣಾಮಕಾರಿ ಚಿಕಿತ್ಸೆ ಅಭಿವೃದ್ಧಿಪಡಿಸುವ ಸಾಧ್ಯತೆ ಕುರಿತು ಚಿಂತಿಸುತ್ತಿದ್ದಾರೆ.
ಇಲ್ಲಿನ ಆಕರ ಕೋಶ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ಈ ಕುರಿತು ಚರ್ಚಿಸಿದರು. ‘ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸಬೇಕೆಂಬ ಆಶಯ ಹೊಂದಿರುವ ನನಗೆ ಸಾಂಸ್ಕೃತಿಕ ಪರಂಪರೆ ಮತ್ತು ವೈಜ್ಞಾನಿಕ ಪರಂಪರೆಗಳನ್ನು ಸಮನ್ವಯಗೊಳಿಸುವ ಇರಾದೆ ಇದೆ. ಕ್ಯೋಟೊ ನಗರವು ಸಾಂಸ್ಕೃತಿಕ ಮತ್ತು ವೈಜ್ಞಾನಿಕತೆ ಹದವಾಗಿ ಮಿಳಿತವಾಗಿರುವ ನಗರವಾಗಿದೆ. ನನ್ನ ಗುರಿಯ ಹಾದಿಯಲ್ಲಿ ಮುನ್ನಡೆಯಲು ಇಲ್ಲಿಗೆ ನೀಡಿರುವ ಭೇಟಿಯು ಸದಾ ಪ್ರೇರಣೆ ನೀಡಲಿದೆ’ ಎಂದು ಮೋದಿ ಇದೇ ವೇಳೆ ಹೇಳಿದರು.
ದೇಹದಲ್ಲಿನ ಕೆಂಪು ರಕ್ತ ಕಣಗಳ ನೈಜ ಆಕಾರವು ತಟ್ಟೆಯಾ ಕಾರದಲ್ಲಿರುತ್ತದೆ. ಆದರೆ ಈ ಕಣಗಳು ಕುಡುಗೋಲಿನ ಆಕಾರಕ್ಕೆ ಬದಲಾಗಿ ಉಂಟಾಗುವ ತೀವ್ರ ದೈಹಿಕ ತೊಂದರೆಗಳನ್ನು ಸಿಕ್ಲ್ ಸೆಲ್ ಅನೀಮಿಯಾ (ಒಂದು ಬಗೆಯ ರಕ್ತಹೀನತೆ) ಎನ್ನಲಾಗುತ್ತದೆ.
ಮೋದಿಗೆ ಪ್ಯಾತ್ಯಕ್ಷಿಕೆ
ಕ್ಯೋಟೊ ನಗರದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಂಡು ಹೇಗೆ ಅದನ್ನು ಆಧುನಿಕ ಸುಸಜ್ಜಿತ ನಗರವನ್ನಾಗಿ ಪುನರ್ನಿರ್ಮಾಣ ಮಾಡಿದ ರೀತಿಯ ಬಗ್ಗೆ ನರೇಂದ್ರ ಮೋದಿ ಅವರಿಗೆ ಕ್ಯೋಟೊ ಮೇಯರ್ ದಾಯಿಸಕಾ ಕಡೊಕಾವಾ ಅವರು ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಿದರು.
ನಗರದ ನಾಗರಿಕರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಬಗ್ಗೆಯೂ 40 ನಿಮಿಷಗಳ ಈ ಪ್ರಾತ್ಯಕ್ಷಿಕೆಯ ವೇಳೆ ಕಡೊಕಾವಾ ತಿಳಿಸಿದರು. ಈ ಸ್ವಚ್ಛತಾ ಕಾರ್ಯದಲ್ಲಿ ವಿದ್ಯಾರ್ಥಿಗಳು ಕೂಡ ಭಾಗಿಯಾಗಿ ನಗರದ ತ್ಯಾಜ್ಯ ಸಂಗ್ರಹ ಪ್ರಮಾಣ ಶೇ 40ರಷ್ಟು ಇಳಿಯಲು ಕಾರಣರಾದರು ಎಂಬುದನ್ನು ಗಮನಕ್ಕೆ ತಂದರು.
ವಾರಾಣಸಿ ನಗರವನ್ನು ಸುಸಜ್ಜಿತ ನಗರವನ್ನಾಗಿಸಲು (ಸ್ಮಾರ್ಟ್ ಸಿಟಿ) ಎರಡು ರಾಷ್ಟ್ರಗಳ ನಡುವೆ ಒಪ್ಪಂದ ಏರ್ಪಟ್ಟ ಮರುದಿನವೇ ಈ ಪ್ರಾತ್ಯಕ್ಷಿಕೆ ತೋರಿಸಲಾಗಿದೆ. ಈ ಸಂದರ್ಭದಲ್ಲಿ ಮೋದಿ ಅವರು ಕಡೊಕಾವಾ ಅವರಿಗೆ ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಿದರು. ‘ನಾನು ಸಂಸತ್ತಿನಲ್ಲಿ ವಾರಾಣಸಿಯನ್ನು ಪ್ರತಿನಿಧಿಸುತ್ತೇನೆ. ಕ್ಯೋಟೊ ನಗರವನ್ನು ಅಭಿವೃದ್ಧಿಪಡಿಸಿದ ಬಗೆಯನ್ನು ಇಲ್ಲಿ ಅರಿತಿದ್ದೇನೆ’ ಎಂಬ ಒಕ್ಕಣೆಯನ್ನು ಅದರಲ್ಲಿ ಅವರು ಬರೆದರು. ಮೋದಿ ಅವರು ಮೇಯರ್ ಅವರಿಗೆ ವಾರಾಣಸಿ ನಗರದ ಡಿಜಿಟಲ್ ನಕ್ಷೆಯೊಂದನ್ನು ಕೂಡ ನೀಡಿದರು.
ದೇವಾಲಯಗಳು ಮತ್ತು ಬೌದ್ಧವಿಹಾರಗಳಿಗೆ ಹೆಸರಾದ ಕ್ಯೋಟೊ ನಗರದಲ್ಲಿ ಇಂತಹ ಸುಮಾರು 2000 ಪವಿತ್ರ ತಾಣಗಳಿವೆ. ಟೋಕಿಯೊ ಜಪಾನ್ನ ರಾಜಧಾನಿಯಾಗುವುದಕ್ಕೆ ಮುನ್ನ ಒಂದು ಸಾವಿರ ವರ್ಷಗಳಿಗೂ ಹೆಚ್ಚು ಕಾಲ ಇದು ಆ ದೇಶದ ರಾಜಧಾನಿಯಾಗಿತ್ತು.
ಶಿಂಝೊ ಕಾತರ: ಜಪಾನ್ ಮತ್ತು ಭಾರತದ ಚಾರಿತ್ರಿಕ ಬಾಂಧವ್ಯವನ್ನು ಕೊಂಡಾಡಿದ ಜಪಾನ್ ಪ್ರಧಾನಿ ಶಿಂಝೊ ಅಬೆ ಅವರು, ನರೇಂದ್ರ ಮೋದಿ ಅವರೊಂದಿಗೆ ಸೋಮವಾರ ನಡೆಯಲಿರುವ ಶೃಂಗಸಭೆಗೆ ಕಾತರದಿಂದ ಕಾಯುತ್ತಿರುವುದಾಗಿ ಹೇಳಿದ್ದಾರೆ. ಕ್ಯೋಟೊ ನಗರದ ಕೆಲ ಬೌದ್ಧವಿಹಾರಗಳಿಗೆ ಭೇಟಿ ನೀಡಿದ ನಂತರ ಶಿಂಝೊ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.