ನವದೆಹಲಿ (ಪಿಟಿಐ): ಬಜೆಟ್ನಲ್ಲಿ ಕಾರ್ಪೊರೇಟ್ ವಲಯಕ್ಕೆ ರತ್ನಗಂಬಳಿ ಆತಿಥ್ಯ ನೀಡಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ರಕ್ಷಣಾ ವಲಯವನ್ನೂ ಬಲಗೊಳಿಸಲು ಯತ್ನಿಸಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಸುಮಾರು ಶೇಕಡ 11 ರಷ್ಟು ಏರಿಕೆ ಮಾಡಿದ್ದಾರೆ.
ಕಳೆದ ಬಾರಿಗೆ ಹೋಲಿಸಿದರೆ 2015-16ರಲ್ಲಿ ಶೇಕಡ 10.95 ರಷ್ಟು ಏರಿಸಲಾಗಿದ್ದು, 2.46 ಲಕ್ಷ ಕೋಟಿ ರೂಪಾಯಿ ನಿಗದಿ ಪಡಿಸಲಾಗಿದೆ.
2014-15ನೇ ಸಾಲಿನ ಬಜೆಟ್ನಲ್ಲಿ 2.29 ಲಕ್ಷ ಕೋಟಿ ರೂಪಾಯಿ ನಿಗದಿ ಪಡಿಸಲಾಗಿತ್ತು. ಬಳಿಕ ಅದನ್ನು ಪರಿಷ್ಕರಿಸಿ 2,22,370 ಕೋಟಿ ರೂಪಾಯಿಗೆ ತಗ್ಗಿಸಲಾಗಿತ್ತು.
ತಾಯ್ನಾಡಿನ ಪ್ರತಿ ಇಂಚು ಭೂಮಿಯ ರಕ್ಷಣೆಗೆ ಎಲ್ಲಕ್ಕೂ ಮೊದಲ ಆದ್ಯತೆ ಎಂದು ತಿಳಿಸಿದ ಜೇಟ್ಲಿ, 'ಭಾರತದಲ್ಲಿ ತಯಾರಿಸಿ' ಯೋಜನೆ ಮೂಲಕ ಭಾರತವು ಅಗತ್ಯವಿರುವಷ್ಟು ರಕ್ಷಣಾ ಉಪಕರಣಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.